ಗೋಕಾಕ: ‘ವಿಧಾನಸಭೆಯ ಉಪ ಚುನಾವಣೆಯು ಮೆರಿಟ್ ಮೇಲೆ ನಡೆದಿಲ್ಲ. ಬದಲಿಗೆ, ಜಾತಿ–ಧರ್ಮದ ಆಧಾರದ ಮೇಲೆ ನಡೆದಿದೆ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮತ್ತೆ ಚುನಾವಣೆ ಆಗೋದು ಬೇಡ. ಈಗಿನ ಸರ್ಕಾರವೇ ಸ್ಥಿರವಾಗಿರಲಿ ಎಂಬ ಭಾವನೆಯಲ್ಲಿ ಜನ ಬಿಜೆಪಿಗೆ ಮತ ಹಾಕಿರಬಹುದು. ಗೋಕಾಕದಲ್ಲಿ ಸ್ಥಳೀಯ ವಿಷಯಗಳ ಬಗ್ಗೆ ಗಮನ ಕೊಡಲಿಲ್ಲ. ಹೀಗಾಗಿ ಬಿಜೆಪಿಗೆ ಗೆಲುವಾಗಿದೆ’ ಎಂದರು.
‘ಉಪ ಚುನಾವಣೆಯಲ್ಲಿ ಗೆದ್ದವರಿಗೆ ಖಾತೆ ಹಂಚಲು ತಯಾರಿ ನಡೆದಿದೆ. ಖಾತೆ ಹಂಚಿಕೆಯಾದ ನಂತರ ಬಿಜೆಪಿಯಲ್ಲಿ ಸಮಸ್ಯೆಯಾಗಲಿದೆ. 15 ಜನ ಒರಿಜಿನಲ್ (ಮೂಲ ಪಕ್ಷದವರು), 15 ಜನ ಹೊರಗಿನವರು ಮಂತ್ರಿಗಳಾದರೆ ಹೇಗೆ ನಿಭಾಯಿಸುತ್ತಾರೋ ಗೊತ್ತಿಲ್ಲ’ ಎಂದು ಹೇಳಿದರು.
ಮೂಲ ಕಾಂಗ್ರೆಸ್ಸಿಗರು ಪ್ರಚಾರದಲ್ಲಿ ಭಾಗಿಯಾಗದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಮೂಲ ವಲಸಿಗರು– ಹೊರಗಿನವರು ಎಂಬ ಭಾವ ಕಾಂಗ್ರೆಸ್ನಲ್ಲಿಲ್ಲ, ಭಿನ್ನಾಭಿಪ್ರಾಯ ಇದೆ. ಫಲಿತಾಂಶದಿಂದ ನೊಂದುಕೊಂಡು ಸಿದ್ದರಾಮಯ್ಯ ಹಾಗೂ ದಿನೇಶ ಗುಂಡೂರಾವ್ ರಾಜೀನಾಮೆ ನೀಡಿರಬಹುದು. ಅವರ ಮನವೊಲಿಸುತ್ತೇವೆ. ಪಕ್ಷಕ್ಕೆ ಅವರು ಅನಿವಾರ್ಯವಾಗಿದ್ದು, ಅವರೇ ಮುಂದುವರಿಯುತ್ತಾರೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.