ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಮಂದಿ ಮೃತಪಟ್ಟಿರುವುದಕ್ಕೆ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸೋಮವಾರ ಇಡೀ ದಿನ ಟ್ವಿಟರ್ನಲ್ಲಿ ಅಭಿಯಾನ ನಡೆದಿದೆ.
‘#ResignSudhakar’ ಹ್ಯಾಷ್ ಟ್ಯಾಗ್ ಬಳಸಿ ನಡೆದ ಅಭಿಯಾನದಲ್ಲಿ 16,000ಕ್ಕೂ ಹೆಚ್ಚು ಮಂದಿ ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಸೇರಿದಂತೆ ಹಲವರು ಈ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಕೋವಿಡ್ನಿಂದ ತಮ್ಮವರನ್ನು ಕಳೆದುಕೊಂಡ ಅನೇಕರು ಈ ಅಭಿಯಾನದಲ್ಲಿ ಪಾಲ್ಗೊಂಡು, ಆರೋಗ್ಯ ಸಚಿವರ ವಿರುದ್ಧದ ತಮ್ಮ ಆಕ್ರೋಶವನ್ನು ಟ್ವಿಟರ್ನಲ್ಲಿ ಹೊರಹಾಕಿದ್ದಾರೆ. ಸುಧಾಕರ್ ವಿರುದ್ಧದ ಅಭಿಯಾನ ಅಖಿಲ ಭಾರತ ಮಟ್ಟದಲ್ಲಿ ಸೋಮವಾರ ’ಟಾಪ್ ಟ್ರೆಂಡಿಂಗ್’ ಪಟ್ಟಿಯಲ್ಲಿ ಇತ್ತು.
‘#Resign Killer Sudhakar’ ಹ್ಯಾಷ್ ಟ್ಯಾಗ್ನಲ್ಲೂ ಸುಧಾಕರ್ ವಿರುದ್ಧ ಅಭಿಯಾನ ನಡೆದಿದೆ. ಇದೇ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ‘#ResignBSY’ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಟ್ವಿಟರ್ನಲ್ಲಿ ಅಭಿಯಾನ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.