ಬೆಳಗಾವಿ: ರಾಯಬಾಗ ತಾಲ್ಲೂಕು ಚಿಂಚಲಿಯ ಕುಂಬಾರ ಗಲ್ಲಿಯ ಯೋಧಹನುಮಂತ ಕುಂಬಾರ ಅವರ ಪುತ್ರಿಯರಿಬ್ಬರು ಬುಧವಾರ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಐಶ್ವರ್ಯಾ (4) ಮತ್ತು ಜಯಶ್ರೀ ಕುಂಬಾರ (5) ಮೃತರು. ತಾಯಿ ಕವಿತಾ ಕುಂಬಾರ ಕೂಡ ಅಸ್ವಸ್ಥರಾಗಿದ್ದು, ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಹೆಸರು ಕಾಳು ಕೆಡದಿರಲೆಂದು ಕೆಮಿಕಲ್ ಲೇಪಿಸಿಟ್ಟಿದ್ದರು. ಅದರಿಂದ ವಿಷ ಗಾಳಿ ಮಂಗಳವಾರ ರಾತ್ರಿ ಕೊಠಡಿಯ ತುಂಬೆಲ್ಲಾ ಹರಡಿ ದೇಹ ಸೇರಿದೆ. ಉಸಿರಾಟಕ್ಕೆ ತೊಂದರೆಯಾಗಿದೆ. ಹಲವು ಬಾರಿ ವಾಂತಿ ಮಾಡಿಕೊಂಡು ನಿತ್ರಾಣರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತರಾದರು’ ಎಂದು ಪ್ರಕರಣ ದಾಖಲಾಗಿದೆ.
‘ಮಕ್ಕಳ ಸಾವಿನ ಬಗ್ಗೆ ಸಂಶಯವಿದೆ’ ಎಂದು ಕವಿತಾ ದೂರಿನಲ್ಲಿ ತಿಳಿಸಿದ್ದಾರೆ. ‘ಅಸಹಜ ಸಾವು ಪ್ರಕರಣ’ ದಾಖಲಿಸಿಕೊಂಡಿರುವ ಕುಡಚಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗವಾಹಟಿಯಲ್ಲಿ ಕರ್ತವ್ಯದಲ್ಲಿರುವ ಹನುಮಂತ ಈಚೆಗೆ ರಜೆ ಮೇಲೆ ಬಂದಿದ್ದ ಕುಟುಂಬದೊಂದಿಗೆವಿಜಯದಶಮಿ ಆಚರಿಸಿ ಹೋಗಿದ್ದರು. ಐಶ್ವರ್ಯಾ ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.