ಎಂ.ಬಿ. ಪಾಟೀಲ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಕೇಬಲ್ ತಯಾರಿಕೆಗೆ ಹೆಸರಾಗಿರುವ ಸಂಯುಕ್ತ ಅರಬ್ ಸಂಸ್ಥಾನದ ಸರ್ಕಾರಿ ಸ್ವಾಮ್ಯದ ಕಂಪನಿ ಡುಕ್ಯಾಬ್ ಗ್ರೂಪ್ ʻನಮ್ಮ ಮೆಟ್ರೊʼ ಸೇರಿ ರಾಜ್ಯದ ಹಲವು ಯೋಜನೆಗಳಲ್ಲಿ ಭಾಗಿಯಾಗಲು ಮಾತುಕತೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಅಲ್ಲದೇ, ಬೆಂಗಳೂರು ಉಪನಗರ ರೈಲು ಯೋಜನೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಕ್ಕೆ ಕೇಬಲ್ ಒದಗಿಸಲು ಆಸಕ್ತಿ ತೋರಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಡುಕ್ಯಾಬ್ ಗ್ರೂಪ್ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ. ಈ ಸಂಬಂಧ ಕಂಪನಿಯ ಜತೆ ಸದ್ಯದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗುವುದು ಎಂದು ಅವರು, ಡುಕ್ಯಾಬ್ ಗ್ರೂಪ್ ನಿಯೋಗದ ಜತೆ ಮಾತುಕತೆಯ ಬಳಿಕ ತಿಳಿಸಿದರು.
ನಿಯೋಗದಲ್ಲಿ ಕಂಪನಿಯ ಆಡಳಿತ ಮಂಡಳಿ ಸದಸ್ಯ ಚಾರ್ಲ್ಸ್ ಎಡ್ವರ್ಡ್ ಮೆಲಾಗುಯ್, ಮೆಶಾಯ್ ಅಲ್ ನಕ್ಬಿ, ಅಧ್ಯಕ್ಷ ಮಹಮದ್ ಮೀರನ್ ಸಾಹೇಬ್, ಅತೀಕ್ ಅನ್ಸಾರಿ ಮತ್ತು ಭಾರತದ ವ್ಯವಹಾರಗಳ ಮುಖ್ಯಸ್ಥ ರಿಜು ಮ್ಯಾಥ್ಯೂ ಇದ್ದರು. ರಾಜ್ಯದ ನೂತನ ಕೈಗಾರಿಕಾ ನೀತಿಗಳಲ್ಲಿರುವ ಅಂಶಗಳು ಮತ್ತು ಉದ್ಯಮಗಳಿಗೆ ಸಿಗುವ ಸೌಲಭ್ಯಗಳನ್ನು ಸಚಿವರು ನಿಯೋಗಕ್ಕೆ ವಿವರಿಸಿದರು.
'ರಾಜ್ಯವು ಕಳೆದ ಸಾಲಿನಲ್ಲಿ ₹50 ಸಾವಿರ ಕೋಟಿ ವಿದೇಶಿ ನೇರ ಹೂಡಿಕೆ ಆಕರ್ಷಿಸಿ, ಗರಿಷ್ಠ ಸ್ಥಾನದಲ್ಲಿರುವ ವಿಚಾರ ಡುಕ್ಯಾಬ್ ಕಂಪನಿಗೂ ತಿಳಿದಿದೆ. ನಮ್ಮಲ್ಲಿನ ಮೂಲ ಸೌಕರ್ಯ ಮತ್ತು ಇಂಧನ ಯೋಜನೆಗಳ ಭಾಗವಾಗಲು ಒಲವು ಹೊಂದಿದೆ. ಕಂಪನಿಯು ಹೂಡಿಕೆ ಮುಂದಾದರೆ ಅಗತ್ಯ ಭೂಮಿ ಒದಗಿಸಲು ಯಾವ ತೊಂದರೆಯೂ ಇಲ್ಲ' ಎಂದು ಪಾಟೀಲ ತಿಳಿಸಿದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.