
ಉಬರ್ ಇಂಡಿಯಾ
ಬೆಂಗಳೂರು: ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಪ್ರವಾಸಿ ತಾಣಗಳಲ್ಲಿ ‘ಚಾಲಕ-ಕಮ್-ಪ್ರವಾಸಿ ಮಾರ್ಗದರ್ಶಿ’ ಯೋಜನೆ ಜಾರಿಗೆ ತರಲು ಉಬರ್ ಇಂಡಿಯಾ ಮುಂದಾಗಿದೆ.
ಈ ಕುರಿತಂತೆ ಕೌಶಲಾಭಿವೃದ್ಧಿ, ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ ಜೊತೆ ಉಬರ್ನ ಏಷ್ಯಾ ಪೆಸಿಫಿಕ್ನ ಸಾರ್ವಜನಿಕ ನೀತಿ ಮುಖ್ಯಸ್ಥ ಮೈಕ್ ಆರ್ಗಿಲ್ ವಿಕಾಸ ಸೌಧದಲ್ಲಿ ಮಂಗಳವಾರ ಮಾತುಕತೆ ನಡೆಸಿದರು.
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ (ಕೆಎಸ್ಡಿಸಿ) ಮುಂದಿನ ಸಭೆಯಲ್ಲಿ ಈ ಪ್ರಸ್ತಾವವನ್ನು ಮಂಡಿಸಲಾಗುವುದು ಎಂದು ಆರ್ಗಿಲ್ ಅವರಿಗೆ ಸಚಿವರು ಭರವಸೆ ನೀಡಿದರು.
‘ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೌಶಲಗಳೊಂದಿಗೆ ಚಾಲಕರನ್ನು ಸಜ್ಜುಗೊಳಿಸುವುದು ವಿಶೇಷವಾಗಿ ತಳ ಸಮುದಾಯದ ಯುವಕರಿಗೆ ಆದಾಯದ ಅವಕಾಶಗಳನ್ನು ಒದಗಿಸುವುದು ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವ ಯೋಜನೆ ಇದಾಗಿದೆ’ ಎಂದು ಸಚಿವರು ತಿಳಿಸಿದರು.
‘ಅಭ್ಯರ್ಥಿಗಳಿಗೆ ಕೆಎಸ್ಡಿಸಿಯು ಲಘು ಮತ್ತು ಭಾರೀ ವಾಹನ ಚಾಲನೆ ತರಬೇತಿ ನೀಡುತ್ತಿದೆ. ತರಬೇತಿ ಪಡೆದ 100ಕ್ಕೂ ಹೆಚ್ಚು ಚಾಲಕರು ಈಗಾಗಲೇ ಭಾರತ ಮತ್ತು ವಿದೇಶಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಈ ಯೋಜನೆಯನ್ನು ಉಬರ್ ಸಂಸ್ಥೆಯು ಪ್ರಸ್ತಾಪಿಸಿದೆ’ ಎಂದರು.
ಹೈವಿಷನ್ ಇಂಡಿಯಾ– ಜಿಟಿಟಿಸಿ ಒಪ್ಪಂದ: ಐಫೋನ್ ತಯಾರಕ ಫಾಕ್ಸ್ಕಾನ್ಗೆ ಕ್ಯಾಮೆರಾ ಪರಿಕರಗಳನ್ನು ಒದಗಿಸುವ ಕೊರಿಯನ್ ಸಂಸ್ಥೆಯಾದ ಹೈವಿಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜಿಟಿಟಿಸಿ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದಕ್ಕೆ ಹೈವಿಷನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಲೀ ಯುನ್ಹೋ ಮತ್ತು ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಸಹಿ ಹಾಕಿದರು.
ಎರಡೂ ಸಂಸ್ಥೆಗಳು ಅರ್ಹ ಜಿಟಿಟಿಸಿ ಪ್ರಶಿಕ್ಷಣಾರ್ಥಿಗಳಿಗೆ ಕೈಗಾರಿಕಾ ಮಾನ್ಯತೆ, ಇಂಟರ್ನ್ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಸಮ್ಮತಿಸಿವೆ. ಜೊತೆಗೆ, ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಕೈಗಾರಿಕಾ ಸೌಲಭ್ಯಗಳು ಮತ್ತು ಪ್ರಾತ್ಯಕ್ಷಿಕೆ ಸಲಕರಣೆಗಳನ್ನು ಪೂರೈಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.