ADVERTISEMENT

ನೆಮ್ಮದಿಯ ನಾಳೆಗಾಗಿ ಬದುಕಿದ ಚಿಂತಕ ಜಿ.ರಾಜಶೇಖರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 19:46 IST
Last Updated 20 ಜುಲೈ 2022, 19:46 IST
ಪಟ್ಟಭಿರಾಮ ಸೋಮಯಾಜಿ, ಹಯವದನ ಮೂಡುಸಗ್ರಿ, ಸಿರಿಲ್ ಮತಾಯಸ್ ಅವರೊಂದಿಗೆ ಜಿ.ರಾಜಶೇಖರ. (ಎಡದಿಂದ ಎರಡನೆಯವರು)
ಪಟ್ಟಭಿರಾಮ ಸೋಮಯಾಜಿ, ಹಯವದನ ಮೂಡುಸಗ್ರಿ, ಸಿರಿಲ್ ಮತಾಯಸ್ ಅವರೊಂದಿಗೆ ಜಿ.ರಾಜಶೇಖರ. (ಎಡದಿಂದ ಎರಡನೆಯವರು)   

ಉಡುಪಿ: ‘ನೆಮ್ಮದಿಯ ನಾಳೆಗಾಗಿ’ ಬದುಕಿನುದ್ದಕ್ಕೂ ರಾಜೀ ರಹಿತ ಹೋರಾಟಗಳನ್ನು ಮಾಡಿದವರು ಜಿ.ರಾಜಶೇಖರ. ಸಮಾಜದ ಹಲವು ಸ್ತರಗಳ ಅಸಮಾನತೆ, ಶೋಷಣೆ, ಮೂಢನಂಬಿಕೆಗಳು ಇಂದಲ್ಲ ನಾಳೆ ನಿರ್ಮೂಲನೆಯಾಗಬಹುದು ಎಂಬ ಆಶಯಗಳೊಂದಿಗೆ ವರ್ತಮಾನದ ಬದುಕನ್ನು ಅಪಾಯಕ್ಕೆ ಒಡ್ಡಿಕೊಂಡು ಬದುಕು ಸವೆಸಿದವರು ಜಿ.ರಾ.

ಹೊರನೋಟಕ್ಕೆ ಬಡಕಲಂತೆ ಕಂಡರೂ ಜರ್ಮನಿಯ ತತ್ವಜ್ಞಾನಿ ನೀಟ್‌ಸೆ ಅವರಂತೆ ದಪ್ಪ ಮೀಸೆ ಬಿಟ್ಟು ಯಾವ, ಯಾರ ಮುಲಾಜಿಗೂ ಒಳಗಾಗದೆ ಹುಲಿಯಂತೆ ಬದುಕಿದರು. ಸತ್ಯ ನುಡಿದರು, ಅದನ್ನೇ ಕೊನೆಯವರೆಗೂ ಬರೆದರು. ವಿಷಯಗಳ ಕುರಿತಾಗಿ ಅವರಲ್ಲಿದ್ದಷ್ಟು ಸ್ಪಷ್ಟತೆ, ಖಚಿತತೆ ಯಾರಲ್ಲೂ ಕಾಣಲಿಲ್ಲ.

ಒಮ್ಮೆ ಕೋಟದ ಶಿವರಾಮ ಕಾರಂತರ ಸಂದರ್ಶನ ಮಾಡುವಾಗ ಖಚಿತ ಹಾಗೂ ಹರಿತವಾದ ಪ್ರಶ್ನೆಗಳ ಮೂಲಕ ಕಾರಂತರನ್ನು ಅಲುಗಾಡಿಸಿ ಬಿಟ್ಟಿದ್ದರು. ‘ಕಾರಂತರು ಮತ್ತು ಕಮ್ಯುನಿಸ್ಟರು’ ಎಂಬ ಶೀರ್ಷಿಕೆಯಲ್ಲಿ ಸಂದರ್ಶನ ಪ್ರಕಟಿಸಿ ಅವರ ನಿಲುವುಗಳನ್ನು ಸ್ಪಷ್ಟವಾಗಿ ದಾಖಲಿಸಿದ್ದರು. ಕನ್ನಡ ಸಾಹಿತ್ಯದಲ್ಲೂ ಅವರದ್ದು ತಳಸ್ಪರ್ಶಿ ಅಧ್ಯಯನ ಜ್ಞಾನ.

ADVERTISEMENT

ಜಿ.ರಾಜಶೇಖರಹೋರಾಟಗಳ ಜತೆಗೆ ಜನಪರ ಕಾಳಜಿಯಪತ್ರಕರ್ತರೂ ಹೌದು. ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ಕಾಗೋಡಿನಲ್ಲಿ ಐತಿಹಾಸಿಕ ರೈತ ಚಳವಳಿ ನಡೆದು ಮುಂದೆ, ಉಳುವವನೆ ಹೊಲದೊಡೆಯ ನೀತಿಯ ಒಕ್ಕಲು ಮಸೂದೆ ಜಾರಿಗೆ ಬಂದಾಗ ಸ್ವತಃ ಕಾಗೋಡಿಗೆ ತೆರಳಿ ಸಣ್ಣ ಹಿಡುವಳಿದಾರರನ್ನು ಭೇಟಿಯಾಗಿ ಸುದೀರ್ಘ ಲೇಖನಗಳನ್ನು ಬರೆದರು.

ಅನಂತಮೂರ್ತಿ ಅವರ ಸಂಪಾದಕತ್ವದ ‘ರುಜುವಾತು’ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾದವು. ಹೆಗ್ಗೋಡಿನ ಅಕ್ಷರ ಪ್ರಕಾಶನ ಹಾಗೂ ಅಭಿನವ ಪ್ರಕಾಶನ ಲೇಖನಗಳನ್ನು ಒಟ್ಟುಮಾಡಿ ಪ್ರಕಟಿಸಿದವು. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಜಿ.ರಾಜಶೇಖರಲೇಖನಗಳ ಮಾಲಿಕೆ ಪಠ್ಯವಾದರೆ ಹೆಚ್ಚು ಸೂಕ್ತ.

ತೊಂಬತ್ತರ ದಶಕದಲ್ಲಿ ‘ಸೌಹಾರ್ದ ವೇದಿಕೆ’ಯಲ್ಲಿ ಸಕ್ರಿಯರಾಗಿದ್ದ ಜಿ.ರಾ, ಕೆ.ಎಲ್. ಅಶೋಕ್‌ ಪ್ರಧಾನ ಕಾರ್ಯದರ್ಶಿತ್ವದ ‘ಕರ್ನಾಟಕ ಕೋಮುಸೌಹಾರ್ದ ವೇದಿಕೆ’ಯ ಶಾಖೆ ಉಡುಪಿಯಲ್ಲಿ ಪ್ರಾರಂಭವಾದಾಗ ಅದರ ಅಧ್ಯಕ್ಷರಾದರು. ದೇಶದ ಯಾವುದೇ ಮೂಲೆಯಲ್ಲಿ ಕೋಮುಗಲಭೆ ನಡೆದರೆ ಉಡುಪಿಯಲ್ಲಿ ಪ್ರತಿಭಟನೆಯ ಕೂಗು ಮೊಳಗುತ್ತಿತ್ತು, ಪ್ರತಿರೋಧ ದಾಖಲಾಗುತ್ತಿತ್ತು.

ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿದ್ದುಕೊಂಡು ಕರಪತ್ರಗಳನ್ನು ಖುದ್ದು ಬರೆದು ತರುತ್ತಿದ್ದರು. ಉಡುಪಿಯ ಬಸ್ ನಿಲ್ದಾಣ ಹತ್ತಿರವಿದ್ದ ಕಚೇರಿಯಲ್ಲಿ ಚಿಂತಕ ಫಣಿರಾಜ್ ಜತೆಗೂಡಿ ಕರಪತ್ರಗಳ ಕರಡು ತಿದ್ದುತ್ತಿದ್ದರು. ದಿನಕರ ಬೆಂಗ್ರೆ ಅವರು ಅಚ್ಚು ಹಾಕಿಸುತ್ತಿದ್ದರು.

ನೂರಾರು ಪ್ರತಿಭಟನಾ ಸಭೆಗಳಿಗೆ ರಾಜಶೇಖರ್ ಸ್ವತಃ ಕರಪತ್ರಗಳನ್ನು ಬರೆದಿದ್ದಾರೆ. ಕರ್ನಾಟಕದ ಜನಪರ ಚಳವಳಿಗಳ ಅಧ್ಯಯನಕ್ಕೆ ಅವರ ಕರಪತ್ರಗಳು ಅಮೂಲ್ಯ ದಾಖಲೆಗಳಾಗಬಲ್ಲವು. ಅವುಗಳ ಸಂಗ್ರಹ ಮತ್ತು ಪ್ರಕಟಣೆ ತುರ್ತಾಗಿ ಆಗಬೇಕಾದ ಕೆಲಸ.

ಸಂಘ ಪರಿವಾರದ ಕೋಮು ದ್ವೇಷ ರಾಜಕಾರಣವನ್ನು ಮುಲಾಜಿಲ್ಲದೆ ಖಂಡಿಸುತ್ತಿದ್ದ ಜಿ.ರಾ., ಆದಿ ಉಡುಪಿಯಲ್ಲಿ ಮುಸ್ಲಿಮರನ್ನು ಬೆತ್ತಲುಗೊಳಿಸಿ ದೌರ್ಜನ್ಯ ನಡೆಸಿದಾಗ ನಿಷ್ಠುರವಾಗಿ ಟೀಕಿಸಿ ಹಲವರನ್ನು ಎದುರು ಹಾಕಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆದು ತೀರ್ಪು ಪ್ರಕಟವಾಗುವಾಗ ಎದುರಾಳಿಗಳ ಮಧ್ಯೆಯೇ ಏಕಾಂಗಿಯಾಗಿ ಕೋರ್ಟ್‌ ಆವರಣದಲ್ಲಿ ನಿಂತ ಗಟ್ಟಿಗ.

ಉಡುಪಿಯ ಪ್ರಗತಿಪರರಿಗೆ, ಮುಕ್ತ ಚಿಂತಕರಿಗೆ ಗುರು ಸಮಾನರಾಗಿದ್ದುಕೊಂಡುಹೋರಾಟಗಳಿಗೆ ಸೈದ್ಧಾಂತಿಕ ಬಲ ತುಂಬುತ್ತಿದ್ದ ಬುದ್ಧಿಜೀವಿಗೆ ಉಡುಪಿಯ ಮುಸ್ಲಿಂ ಒಕ್ಕೂಟ ‘ಮಾನವ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಉಡುಪಿಯ ಅಜ್ಜರಕಾಡಿನಲ್ಲಿರುವ ಜೀವ ವಿಮಾ ನಿಗಮದ ಮುಖ್ಯ ಕಚೇರಿಯಲ್ಲಿ 35 ವರ್ಷ ನೌಕರರಾಗಿ ದುಡಿದ ಜಿ. ರಾಜಶೇಖರ್ ಆಡಂಬರವಿಲ್ಲದೆ ಸರಳವಾಗಿ ಬದುಕಿದವರು. ಇಸ್ತ್ರಿ ಇಲ್ಲದ ಕಪ್ಪು ಪ್ಯಾಂಟ್ ಹಾಗೂ ಕಪ್ಪು ಚೌಕುಳಿ ಶರ್ಟ್ ಅವರ ನೆಚ್ಚಿನ ವಸ್ತ್ರ. ನೀರಿನ ಬಾಟಲಿ ಇರುವ ಕೈಚೀಲವನ್ನು ಹೆಗಲಿಗೆ ಹಾಕಿಕೊಂಡು ತಿರುಗುತ್ತಿದ್ದ ಜಿ.ರಾಜಶೇಖರಇನ್ಮುಂದೆ ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.