ADVERTISEMENT

ಬಿಎಚ್‌ಇಎಲ್‌ ನಷ್ಟಕ್ಕೆ ಸಿಲುಕದಂತೆ ಎಚ್ಚರವಹಿಸಿ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 3:05 IST
Last Updated 28 ಆಗಸ್ಟ್ 2024, 3:05 IST
ಬಿಎಚ್‌ಇಎಲ್‌ ಕಾರ್ಖಾನೆ ಭೇಟಿ ವೇಳೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು
ಬಿಎಚ್‌ಇಎಲ್‌ ಕಾರ್ಖಾನೆ ಭೇಟಿ ವೇಳೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು   

ಬೆಂಗಳೂರು: ‘ಬಿಎಚ್‌ಇಎಲ್‌ಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆಗಳು ಇವೆ. ಆದರೆ ಸಂಸ್ಥೆಯ ಲಾಭದ ಪ್ರಮಾಣ ತೃಪ್ತಿದಾಯಕವಾಗಿಲ್ಲ. ನಿರ್ವಹಣೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಸಂಸ್ಥೆ ನಷ್ಟದ ಸುಳಿಗೆ ಸಿಲುಕುವ ಅಪಾಯವಿದೆ’ ಎಂದು ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಮೈಸೂರು ರಸ್ತೆಯಲ್ಲಿರುವ ಬಿಎಚ್‌ಇಎಲ್‌ನ ವಿದ್ಯುನ್ಮಾನ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಚಿವರು, ಅಧಿಕಾರಿಗಳು ಮತ್ತು ನೌಕರರ ಜತೆ ಮಾತುಕತೆ ನಡೆಸಿದರು. ಈ ವೇಳೆ, ‘ಕೈಗಾರಿಕಾ ಕ್ಷೇತ್ರಕ್ಕೆ ಬೆಂಗಳೂರಿನ ಕೊಡುಗೆ ಅಪಾರ. ದೇಶದ ಅತ್ಯುತ್ತಮ ಕೈಗಾರಿಕೆಗಳು ಇಲ್ಲಿಯೇ ಇದ್ದವು. ಎಚ್‌ಎಂಟಿ, ಐಟಿಐಗಳು ನಷ್ಟಕ್ಕೆ ಸಿಲುಕಿವೆ. ಅಂತಹ ಸ್ಥಿತಿ ಬಿಎಚ್‌ಇಎಲ್‌ಗೆ ಬರಬಾರದು’ ಎಂದರು.

‘ಸಂಸ್ಥೆಯು ಉತ್ತಮವಾಗಿ ಕೆಲಸ ಮಾಡುತ್ತಿದೆ. ಹಾಗೆಂದು ನೂತನ ಆವಿಷ್ಕಾರ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿ ಹಿಂದುಳಿಯಬಾರದು. ಈ ಬಗ್ಗೆ ಅಧಿಕಾರಿಗಳು ಮತ್ತು ನೌಕರ ವರ್ಗ ಎಚ್ಚರಿಕೆಯಿಂದ ಇರಬೇಕು. ಸಂಸ್ಥೆ ನಷ್ಟಕ್ಕೆ ಸಿಲುಕದಂತೆ ತಡೆಯುವ ಹೊಣೆಗಾರಿಕೆ ಅಧಿಕಾರಿ ಮತ್ತು ನೌಕರರ ಮೇಲೆ ಇದೆ’ ಎಂದರು.

ADVERTISEMENT

ಸಚಿವರು ಘಟಕದ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯನಿರ್ವಹಣೆಯ ಮಾಹಿತಿ ಪಡೆದುಕೊಂಡರು. ನೌಕರರ ಜತೆಗೆ ಸಂವಾದ ನಡೆಸಿ, ಅವರ ಕುಂದುಕೊರತೆಗಳನ್ನು ಆಲಿಸಿದರು. ಅವುಗಳನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದರು. ಉತ್ತಮ ಕೆಲಸ ಮಾಡಿದ ನೌಕರರನ್ನು ಸನ್ಮಾನಿಸಲಾಯಿತು.

ಧಾನಿ ನರೇಂದ್ರ ಮೋದಿ ಅವರ ‘ಭಾರತದಲ್ಲೇ ತಯಾರಿಸಿ’ ಮತ್ತು ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗಳ ಅಡಿಯಲ್ಲಿ ಬಿಎಚ್‌ಇಎಲ್‌ ಅನ್ನು ಸಶಕ್ತಗೊಳಿಸಲಾಗುವುದು
ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಭಾರಿ ಕೈಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.