ADVERTISEMENT

ದಲಿತರ ಒಗ್ಗಟ್ಟು ಪ್ರದರ್ಶನ: ನೀಲಿ ಬಾವುಟದ ಅಬ್ಬರ – ಜೈ ಭೀಮ್‌ ಗರ್ಜನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 2:25 IST
Last Updated 7 ಡಿಸೆಂಬರ್ 2022, 2:25 IST
‘ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ’ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧ– ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ – ಪ್ರಜಾವಾಣಿ ಚಿತ್ರ/ ರಂಜು ಪಿ.
‘ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ’ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧ– ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ – ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ಭಿನ್ನಾಭಿಪ್ರಾಯಗಳ ಕಾರಣದಿಂದ ಎರಡೂವರೆ ದಶಕಗಳಿಂದಲೂ ಚದುರಿಹೋಗಿದ್ದ ರಾಜ್ಯದ ವಿವಿಧ ದಲಿತ ಸಂಘಟನೆಗಳು, ಸೈದ್ಧಾಂತಿಕ ಚೌಕಟ್ಟಿನ ಆಧಾರದಲ್ಲಿ ಒಗ್ಗೂಡಿ ಹೋರಾಟ ನಡೆಸುವ ನಿರ್ಧಾರ ಕೈಗೊಂಡಿವೆ. ಕೋಮುವಾದಿ ಶಕ್ತಿಗಳು ಹಾಗೂ ರಾಜಕೀಯ ಪಕ್ಷಗಳ ಜತೆ ನಂಟು ಹೊಂದಿರುವವರನ್ನು ಹೊರಗಿಟ್ಟು ಸಮಾನಮನಸ್ಕ ದಲಿತ ಸಂಘಟನೆಗಳು ಹೋರಾಟದಲ್ಲಿ ಏಕತೆ ಪ್ರದರ್ಶಿಸುವ ತೀರ್ಮಾನಕ್ಕೆ ಬಂದಿವೆ.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನವಾದ ಮಂಗಳವಾರ ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ
ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ– ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶ’ದಲ್ಲಿ ಈ ನಿರ್ಧಾರ ಪ್ರಕಟಿಸಿವೆ. ಗ್ರಾಮಗಳಿಂದ ರಾಜ್ಯ ಮಟ್ಟದವರೆಗೂ ಏಕತೆ ಕಾಯ್ದುಕೊಳ್ಳುವ ಘೋಷಣೆ ಮಾಡಿವೆ.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಪ್ರಮುಖರಲ್ಲಿ ಒಬ್ಬರಾದ ಇಂದೂಧರ ಹೊನ್ನಾಪುರ ಅವರು, ರಾಜ್ಯದ ವಿವಿಧೆಡೆಯಿಂದ ಸಮಾವೇಶಕ್ಕೆ ಬಂದಿದ್ದ ಸಾವಿರಾರು ಜನರ ಸಮ್ಮುಖದಲ್ಲಿಹೋರಾಟದಲ್ಲಿ ಏಕತೆ ಪ್ರದರ್ಶಿ
ಸುವ ನಿರ್ಣಯವನ್ನು ಘೋಷಿಸಿದರು.

ADVERTISEMENT

‘ಹೋರಾಟದ ಮೂಲಕ ಗೌರವ ಸಲ್ಲಿಸಿ’

‘ಸಂವಿಧಾನದ ಮೂಲಕ ನಮಗೆ ಲಭ್ಯವಾಗಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಎಲ್ಲರೂ ಹೋರಾಟಕ್ಕೆ ಇಳಿಯಬೇಕು. ಆ ಮೂಲಕವೇ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಅಂಬೇಡ್ಕರ್‌ ಅವರ ಮೊಮ್ಮಗಳು ರಮಾಬಾಯಿ ಆನಂದ್‌ ತೇಲ್ತುಂಬ್ಡೆ ಹೇಳಿದರು.

‘ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ನ್ಯಾಯ ಪಡೆಯಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು. ಸಂಘರ್ಷ ಇಲ್ಲದೆ ಯಾವ ಅಧಿಕಾರ ಮತ್ತು ಹಕ್ಕುಗಳು ನಮಗೆ ಸಿಗುವುದಿಲ್ಲ. ನೀವು ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಂಡು, ಸಂಘಟನೆ ಕಟ್ಟಿಕೊಂಡು ಹೋರಾಟ ನಡೆಸಬೇಕು’ ಎಂದರು.

ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ನೀಡುವ ಮೂಲಕ ಅಂಬೇಡ್ಕರ್‌ ಅವರು, ದೇಶದಲ್ಲಿನ ಅಸಮಾನತೆ ತೊಲಗಿಸಲು ಪ್ರಯತ್ನಿಸಿದ್ದರು. ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂತಹ ಕ್ರಮಗಳನ್ನು ಕೈಗೊಂಡಿದ್ದರು. ಈ ಎರಡೂ ಅವಕಾಶಗಳನ್ನು ಬಳಸಿಕೊಂಡು ದಲಿತರು, ವಂಚಿತರು ಮತ್ತು ಬಹುಜನರು ನ್ಯಾಯ ಪಡೆಯಬೇಕು ಎಂದು ಹೇಳಿದರು.

‘ಪರಶಿಷ್ಟರ ವಹಿವಾಟಿಗೂ ಕುತ್ತು ಬರಬಹುದು’

‘ದೇವಸ್ಥಾನಗಳ ಬಳಿ ಮುಸ್ಲಿಮರು ಮಾರಾಟ ಮಾಡಬಾರದು ಎಂದು ನಿರ್ಬಂಧ ಹೇರುವುದು ನಡೆಯುತ್ತಿದೆ. ಈಗ ಬಾಯಿ ಮುಚ್ಚಿಕೊಂಡು ಕುಳಿತರೆ ಪರಿಶಿಷ್ಟರು ಕೂಡ ದೇವಸ್ಥಾನಗಳ ಬಳಿ ತೆಂಗಿನಕಾಯಿ, ಹೂವು ಮಾರಾಟ ಮಾಡುವಂತಿಲ್ಲ ಎನ್ನಬಹುದು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಹೇಳಿದರು.

‘ಎರಡನೇ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರ್‌ನ ನಾಝಿ ಸೈನ್ಯ ಮಾಡುತ್ತಿದ್ದಂತಹ ಕೆಲಸಗಳೇ ಈಗ ನಡೆಯುತ್ತಿವೆ. ಗಳಿಸಿದ್ದನ್ನು ಕಳೆದುಕೊಳ್ಳುವ ಪರಿಸ್ಥಿತಿ ನಮ್ಮೆದುರಿಗೆ ಇದೆ. ಸಂವಿಧಾನವನ್ನು ಕಳೆದುಕೊಂಡರೆ ಅರಾಜಕತೆ ಸೃಷ್ಟಿಯಾಗುವ ಮತ್ತು ಕೋಮುವಾದ ರಾರಾಜಿಸುವ ಅಪಾಯವಿದೆ. ಇಂತಹ ಅಪಾಯಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ’ ಎಂದರು.

ಅಂಬೇಡ್ಕರ್‌ ಅವರಿಗೆ ಸಲಾಂ ಹೊಡೆದರೆ, ಅವರ ಬಗ್ಗೆ ಅಹಂ ಬೆಳೆಸಿಕೊಂಡರೆ ಸಾಕಾಗುವುದಿಲ್ಲ. ಅವರ ಕುರಿತು ಅರಿವು ಪಡೆಯಬೇಕು. ಸಂವಿಧಾನದ ದಾರಿ ಮತ್ತು ಅಂಬೇಡ್ಕರ್‌ ಮಾರ್ಗದಲ್ಲಿ ಹೋರಾಡಬೇಕು. ಒಬ್ಬೊಬ್ಬರೇ ಮಾತನಾಡಿದರೆ ಸರ್ಕಾರಕ್ಕೆ ಕೇಳಿಸುವುದಿಲ್ಲ. ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಒಂದಾಗಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.