ಉಪ್ಪಿನಂಗಡಿ: ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆಯನ್ನು ಸೆರೆ ಹಿಡಿದು ಮರಳುತ್ತಿದ್ದ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕೊಂಬಾರು, ಮಂಡೇಕರದ ಬಳಿ ಸಾರ್ವಜನಿಕರು ಗುರುವಾರ ರಾತ್ರಿ ಹಲ್ಲೆ ನಡೆಸಿದರು. ಇಲಾಖಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು.
ಸೆರೆ ಹಿಡಿದ ಕಾಡಾನೆಯನ್ನು ಸಾಕಾನೆಗಳ ನೆರವಿನಿಂದ ರಸ್ತೆ ಬದಿಗೆ ತಂದಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಸಾರ್ವಜನಿಕರು ‘ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ಪೂರ್ಣಗೊಳಿಸಿಲ್ಲ. ಕೇವಲ ಒಂದು ಆನೆಯನ್ನು ಮಾತ್ರ ಹಿಡಿದಿದ್ದೀರಿ’ ಎಂದು ಆರೋಪಿಸಿ ಅಧಿಕಾರಿಗಳ ಮೇಲೆ ಮುಗಿಬಿದ್ದರು.
‘ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ. ನಾಳೆ ಮತ್ತೆ ಬರುತ್ತೇವೆ’ ಎಂದು ಅಧಿಕಾರಿಗಳು ಹೇಳಿದರೂ ಕೇಳದೇ ಸಾರ್ವಜನಿಕರು ಕಲ್ಲು ತೂರಾಟ ಮುಂದುವರಿಸಿದರು. ಇದರಿಂದ ಎರಡು ಪೊಲೀಸ್ ಇಲಾಖೆಯ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ವಲಯ ಅರಣ್ಯಾಧಿಕಾರಿಯೊಬ್ಬರ ಬ್ರೀಝಾ ಕಾರುಗಳಿಗೆ ಹಾನಿ ಉಂಟಾಗಿದೆ. ಡಿವೈಎಸ್ಪಿ ಒಬ್ಬರ ಮೇಲೂ ಕಲ್ಲು ತೂರಲಾಗಿದೆ’ ಎಂದು ಗೊತ್ತಾಗಿದೆ.
ರೆಂಜಿಲಾಡಿ ಗ್ರಾಮದ ನೈಲಾದಲ್ಲಿ ಸ್ಥಳೀಯ ನಿವಾಸಿಗಳಾದ ರಂಜಿತಾ ರೈ ಹಾಗೂ ರಮೇಶ್ ರೈ ಆನೆ ದಾಳಿಯಿಂದ ಸೋಮವಾರ ಅಸುನೀಗಿದ್ದರು. ಇದಾಗಿ ಮೂರು ದಿನಗಳಲ್ಲಿ ಇದೇ ಪರಿಸರದಲ್ಲಿ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಗುರುವಾರ ಸೆರೆ
ಹಿಡಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.