ADVERTISEMENT

ಗರ್ಭಕೋಶಕ್ಕೆ ಕತ್ತರಿ: ಸಿ.ಎಂ ಮನೆವರೆಗೆ ಪಾದಯಾತ್ರೆ

ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 19:31 IST
Last Updated 25 ಏಪ್ರಿಲ್ 2022, 19:31 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿನಾಕಾರಣ ಗರ್ಭಕೋಶ ಶಸ್ತ್ರಚಿಕಿತ್ಸೆಗೊಳಗಾದ ಸಂತ್ರಸ್ತ ಮಹಿಳೆಯರು ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯಿಸಿ ರಾಣೆಬೆನ್ನೂರಿನಿಂದ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆ ಧರಣಿ ನಡೆಸಲು ಸೋಮವಾರ ಪಾದಯಾತ್ರೆ ಆರಂಭಿಸಿದರು. ಅವರಿಗೆ ರೈತ ಸಂಘದವರು ಸಾಥ್ ನೀಡಿದರು  –ಪ್ರಜಾವಾಣಿ ಚಿತ್ರ
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿನಾಕಾರಣ ಗರ್ಭಕೋಶ ಶಸ್ತ್ರಚಿಕಿತ್ಸೆಗೊಳಗಾದ ಸಂತ್ರಸ್ತ ಮಹಿಳೆಯರು ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯಿಸಿ ರಾಣೆಬೆನ್ನೂರಿನಿಂದ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆ ಧರಣಿ ನಡೆಸಲು ಸೋಮವಾರ ಪಾದಯಾತ್ರೆ ಆರಂಭಿಸಿದರು. ಅವರಿಗೆ ರೈತ ಸಂಘದವರು ಸಾಥ್ ನೀಡಿದರು  –ಪ್ರಜಾವಾಣಿ ಚಿತ್ರ   

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರ ಬಳಿ ಹೊಟ್ಟೆನೋವಿನ ಚಿಕಿತ್ಸೆಗೆ ಹೋದ ದಲಿತ, ಲಂಬಾಣಿ ಹಾಗೂ ಬಡ ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶ ತೆಗೆದು ಹಾಕಿದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ 250ಕ್ಕೂ ಹೆಚ್ಚು ಮಹಿಳೆಯರು ರಾಣೆಬೆನ್ನೂರಿನಿಂದ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸಲು ಸೋಮವಾರ ಪಾದಯಾತ್ರೆ ಆರಂಭಿಸಿದರು.

‘2010ರಿಂದ 2017ರವರೆಗೆ ಈ ಪ್ರಕರಣಗಳು ನಡೆದಿದ್ದವು. ಆಗಿನ ಸರ್ಜನ್‌ ಡಾ.ಪಿ.ಶಾಂತ ಅವರು ವಿವಿಧ ಕಾರಣಗಳಿಂದ ಆಸ್ಪತ್ರೆಗೆ ಭೇಟಿ ನೀಡಿದ ಮಹಿಳೆಯರ ಗರ್ಭಕೋಶವನ್ನು ತೆಗೆದಿದ್ದರು. ಅದರ ‍ಪರಿಣಾಮದಿಂದ ಮಾನಸಿಕ ಹಾಗೂ ದೈಹಿಕ ನ್ಯೂನತೆಗಳಿಂದ ಬಳಲುತ್ತಿರುವ 1,522 ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಶೇಷ ಆರ್ಥಿಕ ನೆರವು ಬಿಡುಗಡೆಗೊಳಿಸಬೇಕು’ ಎಂದು ಮಹಿಳೆಯರು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಮಲ್ಲಾಡದ ಮಾತನಾಡಿ, ‘ಸಂತ್ರಸ್ತರಿಗೆ ಸರ್ಕಾರವು ₹45.66 ಕೋಟಿ ಪರಿಹಾರ ನೀಡಲು ಮುಂದಾಗಿದ್ದನ್ನು ತಪ್ಪಿಸಿದ ಈಗಿನ ಆಡಳಿತಾಧಿಕಾರಿ ಡಾ.ಪರಮೇಶ್ವರಪ್ಪ ಅವರನ್ನು ಕರ್ತವ್ಯದಿಂದ ವಜಾ ಮಾಡಬೇಕು’ ಎಂದರು.

ADVERTISEMENT

‘ಪಾದಯಾತ್ರೆಯು ಮೂರು ದಿನ ನಡೆಯಲಿದೆ. ಬುಧವಾರ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಮನೆ ಎದುರು ನೊಂದ ಮಹಿಳೆಯರ ಬೇಡಿಕೆಗಳು ಈಡೇರುವವರೆಗೂ ಧರಣಿ ನಡೆಸುತ್ತೇವೆ’ ಎಂದು ತಿಳಿಸಿದರು.ದೊಡ್ಡಪೇಟೆಯ ವಿರಕ್ತಮಠದ ಗುರುಬಸವ ಸ್ವಾಮೀಜಿ ಪಾಲ್ಗೊಂಡಿದ್ದರು.

2017ರಲ್ಲಿ ಸರ್ಜನ್‌ ಡಾ.ಶಾಂತ ವಿರುದ್ಧ ಎಫ್‌ಐಆರ್‌ ದಾಖಲಾಗಿ, ಸೇವೆಯಿಂದ ಅಮಾನತು ಮಾಡಲಾಗಿತ್ತು. 2019ರಲ್ಲಿ ಮತ್ತೆ ಸರ್ಕಾರಿ ಸೇವೆಗೆ ಮರಳಿದ ಅವರು ಪ್ರಸ್ತುತ ಗೋಕಾಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.