ಬೆಂಗಳೂರು: ‘ಜೀವ ಉಳಿಸಲು ಕೋವಿಡ್ ಲಸಿಕೆ ಸಹಕಾರಿ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಅಮೀರ್–ಈ–ಷರಿಯತ್ ಕರ್ನಾಟಕದ ಮೌಲಾನಾ ಸಗೀರ್ ಅಹ್ಮದ್ ಶನಿವಾರ ಹೇಳಿದ್ದಾರೆ.
‘ಕೋವಿಡ್ ಮಾರಣಾಂತಿಕ ರೂಪಪಡೆದುಕೊಂಡಿದೆ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಈ ಪಿಡುಗನ್ನು ತಡೆಯಬಹುದಾಗಿದೆ. ಕೊರೊನಾ ಮಾತ್ರವಲ್ಲ ಇತರ ರೋಗಗಳಿಂದ ಮುಕ್ತವಾಗಲೂ ಲಸಿಕೆ ಪ್ರಯೋಜನಕಾರಿಯಾಗಿದೆ. ಎಲ್ಲೆಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆಯೋ ಅಲ್ಲಿಗೆ ಹೋಗಿ ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಅಲ್ಲಾಹು ಎಲ್ಲರನ್ನೂ ಈ ರೋಗದಿಂದ ಗುಣಮುಖರನ್ನಾಗಿ ಮಾಡಲಿ. ಈಪಿಡುಗನ್ನು ಆದಷ್ಟು ಬೇಗ ತೊಲಗಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.
‘ಲಸಿಕೆ ಪಡೆಯುವುದು ತಪ್ಪು ಎಂದು ಎಲ್ಲೂ ಹೇಳಿಲ್ಲ.ಷರಿಯತ್ನ ಪ್ರಕಾರ ಲಸಿಕೆ ಪಡೆಯುವುದು ಕಾನೂನು ಬಾಹಿರವಲ್ಲ. ಲಸಿಕೆ ಹಾಕಿಸಿಕೊಳ್ಳಲು ಇಚ್ಛಿಸುವವರು ಅದನ್ನು ತೆಗೆದುಕೊಳ್ಳಬಹುದು. ಅದಕ್ಕೆ ನಮ್ಮ ವಿರೋಧವಿಲ್ಲ. ಎಲ್ಲರೂ ಆರೋಗ್ಯದ ಹಿತದೃಷ್ಟಿಯಿಂದ ಲಸಿಕೆ ಪಡೆಯುತ್ತಾರೆ. ಅದು ಅವರ ಹಕ್ಕು. ರೋಗದಿಂದ ಪಾರಾಗಲು ಚಿಕಿತ್ಸೆ ಅಗತ್ಯ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.