ಹೈಕೋರ್ಟ್
ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಸಿಬಿಐ ತನಿಖೆಯನ್ನು ಹೈಕೋರ್ಟ್ ನಿಗಾದಲ್ಲಿಯೇ ನಡೆಸಬೇಕು’ ಎಂದು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಯ ಮೇಲಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಬುಧವಾರ (ಜುಲೈ 2) ಬೆಳಿಗ್ಗೆ ಪ್ರಕಟಿಸಲಿದೆ.
ಈ ಕುರಿತಂತೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿನ ಮಧ್ಯಂತರ ಅರ್ಜಿಗಳ ವಿಚಾರಣೆ ಪೂರೈಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮಂಗಳವಾರದ ಕಾರ್ಯಸೂಚಿಯ ಪಟ್ಟಿಯಲ್ಲಿ, ಆದೇಶ ಪ್ರಕಟಿಸುವ ಪ್ರಕರಣವೆಂದು ನಮೂದು ಮಾಡಿದ್ದರು.
ಮಧ್ಯಾಹ್ನ ಈ ಕುರಿತಂತೆ ಮುಕ್ತ ನ್ಯಾಯಾಲಯದಲ್ಲಿ ವಿವರಿಸಿದ ನ್ಯಾಯಮೂರ್ತಿಯವರು, ‘ಆದೇಶ ಬುಧವಾರ (ಜುಲೈ 2) ಬೆಳಿಗ್ಗೆ ವೆಬ್ಸೈಟ್ನಲ್ಲಿ ದೊರೆಯಲಿದೆ’ ಎಂದು ಅರ್ಜಿದಾರರ ಪರ ಮತ್ತು ಸಿಬಿಐ ವಕೀಲರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.