ಮಂಗಳೂರು: ‘ಕಾಲೇಜಿನ ಪಾಠ, ಕೋಚಿಂಗ್ ಹಾಗೂ ಪ್ರತಿದಿನದ ಓದು ರ್ಯಾಂಕ್ ಬರಲು ಸಹಕಾರಿಯಾಯಿತು. ಉಳಿದ ಆಕರ್ಷಣೆಗಳನ್ನು ಬದಿಗೊತ್ತಿ, ಓದಿನಲ್ಲಿ ಏಕಾಗ್ರತೆ ಬೆಳೆಸಿಕೊಂಡರೆ, ರ್ಯಾಂಕ್ ಗಳಿಸುವುದು ಕಷ್ಟವಲ್ಲ. ರ್ಯಾಂಕ್ ನಿರೀಕ್ಷಿಸಿದ್ದೆ’ ಎಂದು ಸಿಇಟಿ ಪರೀಕ್ಷೆಯ ಕೃಷಿ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿರುವ ಇಲ್ಲಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ ವರುಣ್ ಗೌಡ ಪ್ರತಿಕ್ರಿಯಿಸಿದರು.
‘ಹಾಸ್ಟೆಲ್ನಲ್ಲಿ ಉಳಿದು ಕಾಲೇಜಿಗೆ ಹೋಗುತ್ತಿದ್ದೆ. ಅಲ್ಲಿ ಚೆನ್ನಾಗಿ ಓದಿಸುತ್ತಿದ್ದರು. ಜೊತೆಗೆ ನನ್ನ ಶ್ರಮವೂ ಸಾಕಷ್ಟಿತ್ತು’ ಎನ್ನುವ ವರುಣ್, ಬೆಂಗಳೂರಿನಲ್ಲಿ ಸರ್ವೇಯರ್ ಆಗಿರುವ ಭೀಮಯ್ಯ ಮತ್ತು ಅನಿತಾ ದಂಪತಿ ಪುತ್ರ.
ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ ಶಶಾಂಕ ಪಿ, ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ‘ಸಿಇಟಿ ಪರೀಕ್ಷೆಯ ಮಾದರಿ ಉತ್ತರ ಪತ್ರಿಕೆ ನೋಡಿದ ಮೇಲೆ ರ್ಯಾಂಕ್ ಬರಬಹುದೆಂದು ನಿರೀಕ್ಷಿಸಿದ್ದೆ. ನಾಲ್ಕನೇ ರ್ಯಾಂಕ್ ದೊರೆತಿದ್ದು ತುಂಬ ಖುಷಿಯಾಗಿದೆ. ರಾತ್ರಿ ನಿದ್ದೆಬಿಟ್ಟು ಓದುವ ರೂಢಿಯಿಲ್ಲ. ಕ್ಲಾಸಿನಲ್ಲಿ ಉಪನ್ಯಾಸಕರು ಮಾಡುವ ಪಾಠವನ್ನು ಲಕ್ಷ್ಯಕೊಟ್ಟು ಕೇಳಿದರೆ, ವಿಷಯ ಹೆಚ್ಚು ಸ್ಪಷ್ಟವಾಗುತ್ತದೆ. ಅದೇ ನಾನು ರ್ಯಾಂಕ್ ಪಡೆದಿರುವ ಗುಟ್ಟು ಕೂಡ ಹೌದು. ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ಕಾಲೇಜಿಗೆ ದ್ವಿತೀಯ (ಪಿಸಿಎಂ– 300ಕ್ಕೆ 299 ಅಂಕ) ಸ್ಥಾನ ಪಡೆದಿದ್ದೆ’ ಎಂದು ಶಶಾಂಕ್ ಪ್ರತಿಕ್ರಿಯಿಸಿದರು.
ಪುತ್ತೂರಿನ ಡಾ.ಅರುಣಕುಮಾರಿ ಮತ್ತು ಡಾ.ಪ್ರಕಾಶ್ ಕುಲಕರ್ಣಿ ದಂಪತಿ ಪುತ್ರ ಶಶಾಂಕ್ ಅವರು, ಕಂಪ್ಯೂಟರ್ ಸೈಯನ್ಸ್ನಲ್ಲಿ ಎಂಜಿನಿಯರಿಂಗ್ ಮಾಡುವ ಗುರಿ ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.