ADVERTISEMENT

ಸಿಎಂಗೆ ವೀರೇಂದ್ರ ಹೆಗ್ಗಡೆ ಕೃತಜ್ಞತೆ: ಸರ್ಕಾರ ಯಶಸ್ವಿಯಾಗಿ ನಡೆಯಲೆಂದು ಹಾರೈಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2019, 15:23 IST
Last Updated 29 ಮೇ 2019, 15:23 IST
   

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಲೆದೋರಿದ್ದ ನೀರಿ ಸಮಸ್ಯೆಗೆ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಸ್ಪಂದಿಸಿದ ವಿಧಾನಕ್ಕೆ ಮೆಚ್ಚಿರುವ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಧರ್ಮಸ್ಥಳದಲ್ಲಿ ಮಳೆ ಇಲ್ಲದೆ ನದಿ ಬತ್ತಿ ನೀರಿಗೆ ತತ್ವಾರ ಎದುರಾಗಿದ್ದ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಪತ್ರ ಬರೆದಿದ್ದ ಹೆಗ್ಗಡೆಯವರು, ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ತಮ್ಮ ಧಾರ್ಮಿಕ ಪ್ರವಾಸವನ್ನು ಮುಂದೂಡುವಂತೆ ಕೋರಿದ್ದರು. ಹೆಗ್ಗಡೆ ಅವರ ಕೋರಿಕೆ ಮರುದಿನ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ದ ಸಿಎಂ ಪರಿಸ್ಥಿತಿಯ ವರದಿ ಪಡೆದಿದ್ದರು. ಅಲ್ಲದೆ ನೇತ್ರಾವತಿ ನದಿಗೆ ಕಿಂಡಿ ಜಲಾಶಯಗಳನ್ನು ನಿರ್ಮಿಸಲು ತೀರ್ಮಾನಿಸಿದ್ದರು.

ಇದೇ ಹಿನ್ನೆಲೆಯಲ್ಲಿ ಇಂದು ಸಿಎಂ ಎಚ್ಡಿಕೆ ಅವರಿಗೆ ಪತ್ರ ಬರೆದಿರುವ ಹೆಗ್ಗಡೆ, ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಎಚ್ಡಿಕೆಯ ಅವರ ದಕ್ಷ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ನಡೆಯಲೆಂದು ಮಂಜುನಾಥಹಾರೈಸಲೆಂದು ಕೋರುವುದಾಗಿಹೇಳಿದ್ದಾರೆ.

ADVERTISEMENT

ಪತ್ರದ ಒಕ್ಕಣೆ ಏನು?

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಕಂಡು ಬಂದ ತಕ್ಷಣ ನಿಮ್ಮ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್‌. ಸೆಲ್ವಮಣಿ, ಕರ್ನಾಟಕ ಜನ ಮಂಡಳಿ ಮತ್ತು ಸಣ್ಣ ನೀರಾವರಿ ಯೋಜನೆಯ ಅಧಿಕಾರಿಗಳು ಧರ್ಮಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಗಮನಿಸಿ ನನ್ನೊಂದಿಗೆ ಮಾತನಾಡಿ ಸರಕಾರಕ್ಕೆ ವರದಿ ನೀಡಿರುತ್ತಾರೆ. ನಮ್ಮ ಕೋರಿಕೆಯನ್ನು ಮನ್ನಿಸಿ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ನೀವು ನೇತ್ರಾವತಿ ನದಿ ಮತ್ತು ನೆರಿಯ ನದಿಗೆ 2 ಕಿಂಡಿ ಅಣೆಕಟ್ಟು ನಿರ್ಮಿಸಲು 7 ಕೋಟಿಯನ್ನು ಮಂಜೂರು ಮಾಡಿ ಅಧಿಕಾರಿಗಳಿಗೆ ಆದೇಶ ನೀಡಿರುವುದು ಸಂತೋಷವಾಗಿದೆ. ನಿಮ್ಮ ಕಾಳಜಿಗೆ ನಮ್ಮ ಕ್ಷೇತ್ರದ ವತಿಯಿಂದ ಹಾಗೂ ಎಲ್ಲ ಭಕ್ತಾದಿಗಳ ಪರವಾಗಿ ಕೃತಜ್ಞತೆಗಳು. ಮಂಜುನಾಥ ಸ್ವಾಮಿ ನಿಮಗೆ ದೀರ್ಘಾಯುರಾರೋಗ್ಯವನ್ನಿತ್ತು, ನಿಮ್ಮ ದಕ್ಷ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸುವಂತೆ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಪತ್ರ ಬರೆದಿದ್ದಾರೆ.

ನೀರು ರವಾನಿಸಿದ ಭಕ್ತರಿಗೂ ಕೃತಜ್ಞತೆ

ಮಾಧ್ಯಮಗಳಲ್ಲಿ ಧರ್ಮಸ್ಥಳದ ನೀರಿನ ಸಮಸ್ಯೆಯ ಕುರಿತು ವರದಿ ಪ್ರಕಟವಾಗುತ್ತಲೇ ಬೆಂಗಳೂರಿನ ಅನೇಕ ಮಂದಿ ಧರ್ಮಸ್ಥಳಕ್ಕೆ ಬಂದು ನೀರು ತಂದುಕೊಟ್ಟು ಹೋಗಿದ್ದಾರೆ. ಅದನ್ನು ಅನ್ನಪೂರ್ಣೇಶ್ವರಿ ಅನ್ನಸತ್ರಕ್ಕೆ ಬಳಸಲಾಗಿದೆ. ಭಕ್ತಾದಿಗಳಿಗೆ ಕುಡಿಯಲು ಬಳಸಲಾಗಿದೆ ಎಂದು ಅವರು ಬರೆದಿದ್ದಾರೆ.

ಮುಖ್ಯಮಂತ್ರಿಗೆ ಹೆಗ್ಗಡೆ ಬರೆದ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.