ADVERTISEMENT

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಲಿ: ಸರ್ಕಾರಗಳಿಗೆ ವೆಂಕಯ್ಯ ನಾಯ್ಡು ಸಲಹೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 19:45 IST
Last Updated 2 ನವೆಂಬರ್ 2019, 19:45 IST
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಬಿ.ಟೆಕ್‌ ಪದವಿ ಕೋರ್ಸ್‌ನ ಮೆಟಲರ್ಜಿಕಲ್‌ ಅಂಡ್‌ ಮೆಟೀರಿಯಲ್ಸ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿರುವ ವಿದ್ಯಾರ್ಥಿ ವಿಶೇಶ್‌ ಗೋಯಲ್‌ ಅವರಿಗೆ ಚಿನ್ನದ ಪದಕದೊಂದಿಗೆ ಪದವಿ ಪ್ರದಾನ ಮಾಡಿದರು. ಸಂಸ್ಥೆ ನಿರ್ದೇಶಕ ಪ್ರೊ.ಕೆ.ಉಮಾ ಮಹೇಶ್ವರ್‌ ರಾವ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎನ್‌ಐಟಿಕೆ ಅಧ್ಯಕ್ಷ ಪ್ರೊ.ಕೆ.ಬಾಲವೀರ ರೆಡ್ಡಿ ಉಪಸ್ಥಿತರಿದ್ದರು.
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಬಿ.ಟೆಕ್‌ ಪದವಿ ಕೋರ್ಸ್‌ನ ಮೆಟಲರ್ಜಿಕಲ್‌ ಅಂಡ್‌ ಮೆಟೀರಿಯಲ್ಸ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿರುವ ವಿದ್ಯಾರ್ಥಿ ವಿಶೇಶ್‌ ಗೋಯಲ್‌ ಅವರಿಗೆ ಚಿನ್ನದ ಪದಕದೊಂದಿಗೆ ಪದವಿ ಪ್ರದಾನ ಮಾಡಿದರು. ಸಂಸ್ಥೆ ನಿರ್ದೇಶಕ ಪ್ರೊ.ಕೆ.ಉಮಾ ಮಹೇಶ್ವರ್‌ ರಾವ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎನ್‌ಐಟಿಕೆ ಅಧ್ಯಕ್ಷ ಪ್ರೊ.ಕೆ.ಬಾಲವೀರ ರೆಡ್ಡಿ ಉಪಸ್ಥಿತರಿದ್ದರು.   

ಮಂಗಳೂರು: ಮಕ್ಕಳ ಆರಂಭಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. ಎಸ್‌ಎಸ್‌ಎಲ್‌ಸಿವರೆಗೂ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಸಲಹೆ ನೀಡಿದರು.

ಸುರತ್ಕಲ್‌ನಲ್ಲಿರುವ ಎನ್‌ಐಟಿಕೆಯಲ್ಲಿ ಶನಿವಾರ ನಡೆದ 17ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ಅವರು, ‘ಮಾತೃಭಾಷೆ ನಮ್ಮ ಕಣ್ಣು ಇದ್ದಂತೆ. ಇತರೆ ಭಾಷೆಗಳು ಕನ್ನಡಕ ಇದ್ದಂತೆ. ಕಣ್ಣು ಸರಿಯಾಗಿದ್ದರೆ ದೃಷ್ಟಿ ಸುಧಾರಿಸಿಕೊಳ್ಳಬಹುದು ಎಂಬುದನ್ನು ಮರೆಯಬಾರದು’ ಎಂದರು.

ಮಕ್ಕಳಿಗೆ ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಇರುತ್ತದೆ. ಎಷ್ಟಾದರೂ ಭಾಷೆಗಳನ್ನು ಕಲಿಯಲಿ. ಆದರೆ, ಆರಂಭಿಕ ಹಂತದ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುವ ಮೂಲಕ ಸ್ಥಳೀಯ ಭಾಷೆಗಳನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು.

ADVERTISEMENT

ಖಾಸಗಿ ಹೂಡಿಕೆ ಅಗತ್ಯ: ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಕೈಗೊಳ್ಳುವ ಸಂಶೋಧನೆ ಹಾಗೂ ಆವಿಷ್ಕಾರ ಯೋಜನೆಗಳಲ್ಲಿ ಖಾಸಗಿ ವಲಯದ ಹೂಡಿಕೆ ಉತ್ತೇಜಿಸುವ ಅಗತ್ಯವಿದೆ. ಖಾಸಗಿ ವಲಯದ ಉದ್ದಿಮೆಗಳು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಪ್ರತ್ಯೇಕವಾದ ಶೈಕ್ಷಣಿಕ ನಿಧಿ ಸ್ಥಾಪಿಸಬೇಕು’ ಎಂದು ಕರೆ ನೀಡಿದರು.

‘ದಾಳಿ ನಡೆಸಲ್ಲ’
ಮೈಸೂರು:
ಯಾವುದೇ ದೇಶದ ಮೇಲೆ ದಾಳಿ ನಡೆಸುವ ಉದ್ದೇಶ ಭಾರತಕ್ಕೆ ಇಲ್ಲ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶನಿವಾರ ಇಲ್ಲಿ ಹೇಳಿದರು.

‘ವಿದೇಶಿಯರು ನಮ್ಮ ಮೇಲೆ ಆಕ್ರಮಣ ನಡೆಸಿ ಸಂಪತ್ತು ಲೂಟಿ ಮಾಡಿದ್ದಾರೆಯೇ ಹೊರತು ನಾವು ಇದುವರೆಗೆ ಯಾರ ಮೇಲೂ ದಾಳಿ ಮಾಡಿದ ಇತಿಹಾಸ ಇಲ್ಲ. ನಮಗೆ ಎಲ್ಲ ರೀತಿಯ ತೊಂದರೆ ಕೊಡುತ್ತಿರುವ ನೆರೆಯ ದೇಶದೊಂದಿಗೂ ಸ್ನೇಹದಿಂದ ಇರಲು ಬಯಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.