ಬೆಂಗಳೂರು: ‘ಮುಖ್ಯಮಂತ್ರಿಯಾಗಿದ್ದವನೊಬ್ಬ ಮುಂದಿನ ವಿಧಾನಸಭಾ ಚುನಾವಣೆಗಾಗಿ ಕ್ಷೇತ್ರ ಹುಡುಕುತ್ತಿದ್ದಾನೆ. ಇದು ಕುರುಬ ಸಮಾಜಕ್ಕೇ ನಾಚಿಕೆಯಾಗುವಂತಹದ್ದು. ಎಲ್ಲೂ ಬೇಡ ಹುಣಸೂರಿಗೆ ಬಾರಪ್ಪ. ನೀನು ಹುಣಸೂರಿಗೆ ಬಂದು ನನ್ನನ್ನು ಸೋಲಿಸಿದ್ದೆ. ಅದೇ ಕ್ಷೇತ್ರದಲ್ಲಿ ನಿನ್ನನ್ನು ನಾವೆಲ್ಲಾ ಗೆಲ್ಲಿಸುತ್ತೇವೆ’ ಎಂದುವಿಧಾನಪರಿಷತ್ನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಯ ನಿಯಮಬಾಹಿರ ಕಾರ್ಯವೈಖರಿ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಂಗಳವಾರ ಮಾತನಾಡಿದರು.
‘ನಮಗೆ ವಿಶಾಲ ಮನೋಭಾವವಿದೆ. ಸಮಾಜದ ಹಿತಕ್ಕಾಗಿ ತ್ಯಾಗಕ್ಕೆ ಸಿದ್ಧವಿದ್ದೇವೆ. ಈಗ ಮಠದ ಸ್ಥಿತಿ ಏನಾಗಿದೆ. ಮಠಕ್ಕಾಗಿ ಎಲ್ಲಾ ತ್ಯಾಗಗಳನ್ನೂ ಮಾಡಿದ್ದೆ. ಮೂರು ವರ್ಷ ಹೆಂಡತಿ–ಮಕ್ಕಳು, ಕ್ಷೇತ್ರ ಬಿಟ್ಟು ಸುತ್ತಾಡಿದ್ದೆ. ಮುಖ್ಯಮಂತ್ರಿಯಾಗಿದ್ದಾಗ (ಸಿದ್ದರಾಮಯ್ಯ) ನನ್ನನ್ನೇ ಬಿಟ್ಟು ಬೆಳ್ಳಿ ಹಬ್ಬ ಆಚರಣೆ ಮಾಡಿಸಿದ. ಇದಕ್ಕಿಂತ ಅನ್ಯಾಯ ಬೇಕೇ. ನಿಮಗೆ ನಾಚಿಕೆ ಆಗುವುದಿಲ್ಲವೇ’ ಎಂದು ಹರಿಹಾಯ್ದರು.
‘ಇದೇನಾ ಸಂಘಟನೆ. ಇದೇನಾ ಕುರುಬರ ಉದ್ಧಾರ. ಮಠ ಇಬ್ಭಾಗ ಮಾಡಿದಿರಿ. ರಾಜಕೀಯ ಒಡೆದಿರಿ, ಕುರುಬರ ಸಂಘ ಇಬ್ಭಾಗ ಮಾಡಿದಿರಿ. ಇನ್ನೇನು ಉಳಿದಿದೆಯಪ್ಪಾ. ನಾನೂ ಕಾಯುತ್ತಿದ್ದೇನೆ. ದಾವಣಗೆರೆಯಲ್ಲಿ ಸಮುದಾಯದ ಸಭೆ ಕರೆಯುತ್ತೇನೆ. ನೀವೆಲ್ಲಾ ಬಂದು ತೀರ್ಮಾನ ಮಾಡಿ’ ಎಂದರು.
‘ರೇವಣ್ಣ ಏನಾದ. ಆತನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಲು ಆಗಲಿಲ್ಲವಲ್ಲ. ಆತ ಈಗ ಬೀದಿಗೆ ಬಿದ್ದಿದ್ದಾನೆ. ನಿಮ್ಮನ್ನು ಕಾಂಗ್ರೆಸ್ಗೆ ಸೇರಿಸಿದ್ದು ನಾವು. ನಿಮಗೆ ಕೃತಜ್ಞತೆ ಇದೆಯಾ. ಕೃತಜ್ಞತೆ ಇಲ್ಲದ ನಾಯಕತ್ವ ಜಾಸ್ತಿ ದಿನ ಉಳಿಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.