ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯು ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ಯುಜಿಸಿ ನಿಯಮಾವಳಿಗೆ ತಿದ್ದುಪಡಿ– ಸಾಧಕಗಳ ಕುರಿತು ಸಮಾಲೋಚನಾ ಸಭೆ
–ಪ್ರಜಾವಾಣಿ ಚಿತ್ರ
ಬೆಂಗಳೂರು: ವಿಶ್ವವಿದ್ಯಾಲಯವು ಧನಸಹಾಯ ಆಯೋಗ (ಯುಜಿಸಿ) ನಿಯಮಾವಳಿಗಳಿಗೆ ತರಲು ಹೊರಟಿರುವ ತಿದ್ದುಪಡಿಯು ಪ್ರತಿಗಾಮಿ ತನದಿಂದ ಕೂಡಿದೆ. ಈ ತಿದ್ದುಪಡಿಗಳನ್ನು ರಾಜ್ಯ ಸರ್ಕಾರವು ಸಾರಾಸಗಟಾಗಿ ತಿರಸ್ಕರಿಸಬೇಕು’ ಎಂದು ‘ಜಾಗೃತ ನಾಗರಿಕರು ಕರ್ನಾಟಕ ವೇದಿಕೆ’ಯು ಒತ್ತಾಯಿಸಿದೆ.
ಯುಜಿಸಿ ನಿಯಮಾವಳಿಗಳ ತಿದ್ದುಪಡಿ ಕುರಿತು ಚರ್ಚಿಸಲು ನಗರದ ಗಾಂಧಿ ಭವನದಲ್ಲಿ ವೇದಿಕೆಯು ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ, ತಿದ್ದುಪಡಿಗಳ ಕುರಿತು ಆತಂಕ ವ್ಯಕ್ತವಾಯಿತು. ಪ್ರೊ.ಎಸ್.ಜಿ ಸಿದ್ದರಾಮಯ್ಯ, ಜಿ.ರಾಮಕೃಷ್ಣ. ನಿರಂಜನಾರಾಧ್ಯ, ಕೆ.ಎಸ್.ವಿಮಲಾ, ಸಬೀಹಾ ಭೂಮಿಗೌಡ, ಮೀನಾಕ್ಷಿ ಬಾಳಿ, ಎಂ.ಎಸ್.ಆಶಾದೇವಿ ಸೇರಿ ಹಲವರು ಸಂವಾದದಲ್ಲಿ ಭಾಗಿಯಾಗಿ, ನೂತನ ನಿಯಮಗಳಲ್ಲಿ ಇರುವ ಅಂಶಗಳ ಪ್ರಸ್ತಾಪಿಸಿದರು.
‘ಕೇಂದ್ರ ಸರ್ಕಾರವು 2020ರಲ್ಲಿ ನೂತನ ಶಿಕ್ಷಣ ನೀತಿಯನ್ನು (ಎನ್ಇಪಿ) ಜಾರಿಗೆ ತಂದಿತ್ತು. ಅದನ್ನು ಹತ್ತಾರು ರಾಜ್ಯಗಳು ತಿರಸ್ಕರಿಸಿದ್ದವು. ಹೀಗಾಗಿ ಅದೇ ನಿಯಮಗಳನ್ನು ಹಿಂಬಾಗಿಲಿನ ಮೂಲಕ ಜಾರಿಗೆ ತರಲು ಯುಜಿಸಿ ನಿಯಮಗಳಿಗೆ ತಿದ್ದುಪಡಿ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳಲು ಈ ಮೂಲಕ ಸಂಚು ನಡೆಸಿದೆ’ ಎಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು.
‘ತಿದ್ದುಪಡಿ ನಿಯಮಗಳು ಕೋಮುವಾದ, ಕಾರ್ಪೊರೇಟ್ ಸಿದ್ದಾಂತಗಳ ತದ್ರೂಪದಂತಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಕಾರ್ಪೊರೇಟ್ ದೈತ್ಯರಿಗೆ ಹೆಚ್ಚಿನ ಹಿಡಿತ ಕೊಡುತ್ತವೆ. ಒಟ್ಟಾರೆಯಾಗಿ ದೇಶದ ಸಾಮಾಜಿಕ ನ್ಯಾಯ ಪರಿಕಲ್ಪನೆ ಮತ್ತು ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರದ ಭಾಗ ಇದು’ ಎಂಬ ಆತಂಕ ವ್ಯಕ್ತವಾಯಿತು.
‘ಈ ತಿದ್ದುಪಡಿ ನಿಯಮಗಳನ್ನು ತಿರಸ್ಕರಿಸಬೇಕು. ಮತ್ತು ಈ ಸಂಬಂಧ ವಿಸ್ತೃತ ವರದಿಯನ್ನು ಸಿದ್ದಪಡಿಸಿ, ರಾಜ್ಯ ಸರ್ಕಾರಕ್ಕೆ ಅದನ್ನು ಸಲ್ಲಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ’ ಎಂದು ವೇದಿಕೆಯ ಮೀನಾಕ್ಷಿ ಬಾಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.