ADVERTISEMENT

ಕಲ್ಲು ಹೊಡೆದವರೊಂದಿಗೆ ಸಂಬಂಧವಿಲ್ಲ: ಕೋಡಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 7:59 IST
Last Updated 19 ಏಪ್ರಿಲ್ 2021, 7:59 IST
   

ಬೆಂಗಳೂರು: ನೌಕರರ ಮುಷ್ಕರದ ನಡುವೆಯೂ ಸಂಚರಿಸುತ್ತಿರುವ ಸರ್ಕಾರಿ ಬಸ್ ಗಳಿಗೆ ಕಲ್ಲು ಹೊಡೆದಿರುವವರ ಜತೆ ತಮಗೆ ಯಾವುದೇ ಸಂಬಂಧ ಇಲ್ಲ ಎಂದು ಸಾರಿಗೆ ನಿಗಮಗಳ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ರೈತ ಸಂಘದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಅವರು, 'ನಾವು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಮುಷ್ಕರದ ನಡುವೆಯೂ ಬಸ್ ಗಳು ಸಂಚರಿಸುತ್ತಿರುವ ಕಾರಣದಿಂದ ಅಸಮಾಧಾನಗೊಂಡ ಜನರು ಕಲ್ಲು ತೂರುವ ಕೆಲಸ ಮಾಡಿರಬಹುದು. ಅವರ ಜತೆ ಸಂಬಂಧವಿಲ್ಲ, ಬೆಂಬಲವೂ ಇಲ್ಲ' ಎಂದರು.

ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸತ್ಯಾಗ್ರಹ ಮುಂದುವರಿಯಲಿದೆ. ಸಾರಿಗೆ ನೌಕರರ ಕೂಟದ ಪ್ರಮುಖರ ಜತೆ ಚರ್ಚಿಸಿ ಹೋರಾಟದ ಮುಂದಿನ ನಡೆ ನಿರ್ಧರಿಸಲಾಗುವುದು ಎಂದು ಹೇಳಿದರು.

ADVERTISEMENT

ಸಾರಿಗೆ ನಿಗಮಗಳ ನೌಕರರಿಗೆ ಶೇಕಡ 20ರಷ್ಟು ವೇತನ ಹೆಚ್ಚಳ ಮತ್ತು ಬಾಕಿ ಮೊತ್ತಕ್ಕೆ ಶೇ 6ರಷ್ಟು ಬಡ್ಡಿ ನೀಡುವಂತೆ 2004ರಲ್ಲಿ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಕ್ರಮ ಕೈಗೊಳ್ಳಬೇಕು ಎಂಬುದು ನೌಕರರ ಬೇಡಿಕೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರಡ. ಸಾರಿಗೆ ಸಚುವ ಲಕ್ಷ್ಮಣ ಸವದಿ ಕೂಡ ಬೆಂಗಳೂರಿನಲ್ಲಿ ಇಲ್ಲ. ನೌಕರರ ಜತೆ ಮಾತುಕತೆ ನಡೆಸುವ ಬದಲಿಗೆ ಚಳವಳಿ ದಮನಕ್ಕೆ ಸರ್ಕಾರ ಯತ್ನಿಸುತ್ತಿದೆ. ಅದರ ಭಾಗವಾಗಿ ಸೋಮವಾರ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.