ಬೆಂಗಳೂರು: ರಾಜ್ಯದಲ್ಲಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾಗಿರುವವರ ಕುರಿತು 25 ವರ್ಷಗಳ ಮಾಹಿತಿ ನೀಡಬೇಕು ಎಂದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವಿವಿಧ ಇಲಾಖೆಗಳಿಗೆ ಸೂಚಿಸಿದೆ.
ಸಮಾಜ ಕಲ್ಯಾಣ ಇಲಾಖೆ, ಪೊಲೀಸ್, ಕಂದಾಯ ಇಲಾಖೆಗಳು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಿ, ವರದಿ ತಯಾರಿಸಿ ಸಮಿತಿಗೆ ಒಪ್ಪಿಸಬೇಕು ಎಂದೂ ಹೇಳಿದೆ.
ರಾಜ್ಯದಲ್ಲಿ 2016 ರಿಂದ 2021 ರ ಅವಧಿಯಲ್ಲಿ ದಾಖಲಾದ ಒಟ್ಟು 36 ಪ್ರಕರಣಗಳ ಪ್ರಗತಿ ಹಾಗೂ ಕಾನೂನು ವಿಚಾರಣೆ ಹಂತದಲ್ಲಿ ಶಿಕ್ಷೆಯಾಗಿರುವ ಪ್ರಕರಣಗಳ ಮಾಹಿತಿ ನೀಡಬೇಕು. 2019 ರಲ್ಲಿ ಉಡುಪಿಯಲ್ಲಿ ನಡೆದ ಮತಾಂತರಕ್ಕೆ ಸಂಬಂಧಿಸಿದಂತೆ ದೂರನ್ನು ರದ್ದು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಇವೆಲ್ಲದರ ಮಾಹಿತಿಯನ್ನು ಗೃಹ ಇಲಾಖೆಯಿಂದ ಸಂಗ್ರಹಿಸಿ ಕೊಡುವಂತೆಯೂ ಸೂಚಿಸಲಾಗಿದೆ.
ಬಲವಂತವಾಗಿ ಬೇರೆ ಧರ್ಮಕ್ಕೆ ಮತಾಂತರ ಮಾಡಿರುವ ವಿಚಾರವಾಗಿ ಬಂದಿರುವ ದೂರುಗಳ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡು ಕ್ರಮ ಕೈಗೊಂಡಿರುವ ಬಗ್ಗೆ ಗೃಹ ಇಲಾಖೆಯಿಂದ ಮಾಹಿತಿ ಸಂಗ್ರ
ಹಿಸಬೇಕು. ಚಿತ್ರದುರ್ಗ ಜಿಲ್ಲೆಯ ಬೆಥೆಲ್ ಬ್ಯಾಪ್ಟಿಸ್ಟ್ ಚರ್ಚಿನ ವಿವರವಾದ ಮಾಹಿತಿ ಒದಗಿಸಿ ನೀಡಬೇಕು.
ಅಧಿಕೃತ ಮತ್ತು ಕಾನೂನಾತ್ಮಕವಾಗಿ ನಡೆಸುತ್ತಿರುವಂತಹ ಚರ್ಚ್ಗಳಿಗೆ ಯಾವುದೇ ತೊಂದರೆ ಆಗದಂತೆ ಮೇಲ್ಕಂಡ ಹೆಚ್ಚುವರಿ ಮಾಹಿತಿಯನ್ನು ವಿವಿಧ ಇಲಾಖೆಗಳಿಂದ ಸಂಗ್ರಹಿಸಿ 30 ದಿನಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಸಮಿತಿಯ ಸೂಚನೆಯ ಅನ್ವಯ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.