ADVERTISEMENT

ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ ? – ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 9:04 IST
Last Updated 25 ಸೆಪ್ಟೆಂಬರ್ 2022, 9:04 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ? ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿಯವರು ಈಗ ಜಾತಿ ಬಣ್ಣ ಕಟ್ಟಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಲಿಂಗಾಯತ ವಿರೋಧಿ ಕಾಂಗ್ರೆಸ್’ ಎಂದು ಬಿಜೆಪಿ ಅಭಿಯಾನ ಆರಂಭಿಸಿರುವ ಬಗ್ಗೆ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಶೇ 40 ಕಮಿಷನ್‌ ಬಗ್ಗೆ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪದ ಬಗ್ಗೆ ನಾವು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಸರ್ಕಾರ ಶೇ 10 ಸರ್ಕಾರ ಎಂದು ನರೇಂದ್ರ ಮೋದಿ ಸುಳ್ಳು ಆರೋಪ ಮಾಡಿದ್ದರು. ಏನೂ ಆಧಾರ ಇಲ್ಲದೆ‌ ನನ್ನ ಮೇಲೆ ಅವರು ಈ ಆರೋಪ ಮಾಡಿದ್ದರು. ನಾನು ಕುರುಬ ಎಂದು ಮೋದಿ ಆರೋಪ ಮಾಡಿದ್ರಾ’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮಲ್ಲಿಯೂ ಲಿಂಗಾಯತ ನಾಯಕರು ಇಲ್ವಾ. ಬಿಜೆಪಿಯವರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಜಾತಿ ಮೊರೆ ಹೋಗಿದ್ದಾರೆ’ ಎಂದರು.

‘ನನ್ನ ಮೇಲೂ ಸುಳ್ಳು, ಸುಳ್ಳು ಪುಸ್ತಕವನ್ನು ಬಿಜೆಪಿವರು ಹೊರಡಿಸಿದ್ದಾರೆ. ನಾನು ಕುರುಬ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆಂದು ನಾನು ಹೇಳಬಹುದೆ?. ವೀರೇಂದ್ರ ಪಾಟೀಲ್‌ ಅವರಿಗೆ ಲಕ್ವ ಇತ್ತು. ಹೀಗಾಗಿ, ಹಿಂದೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಿದ್ದರು’ ಎಂದರು.

‘ಬಿಜೆಪಿಯವರು ವಿಜಯೇಂದ್ರ‌ ಅವರನ್ನು ಮಂತ್ರಿ ಮಾಡದಿರುವುದು ಯಾಕೆ’ ಎಂದೂ ಪ್ರಶ್ನಿಸುವ ಮೂಲಕ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.