ADVERTISEMENT

‘ಕೊಲಂಬೊದಲ್ಲಿ ಜಮೀರ್‌ಗೆ ಯಾವ ಶಾಂತಿ ಸಿಗುತ್ತದೆ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 19:09 IST
Last Updated 14 ಸೆಪ್ಟೆಂಬರ್ 2020, 19:09 IST

ಬೆಂಗಳೂರು: ‘ಕೊಲಂಬೊಗೆ ಹೋದರೆ ಯಾವ ರೀತಿಯ ಶಾಂತಿ ಸಿಗುತ್ತದೆ ಎನ್ನುವುದನ್ನು ಜಮೀರ್ ಅಹಮದ್ ಖಾನ್‌ ಅವರೇ ಸ್ಪಷ್ಟಪಡಿಸಬೇಕು’ ಎಂದು ಸಿ.ಟಿ. ರವಿ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯ ಆದಂತೆ, ಜಮೀರ್‌ಗೆ ಕೊಲಂಬೊದಲ್ಲಿ ಜ್ಞಾನೋದಯವಾಗುವುದೇನೋ’ ಎಂದು ಲೇವಡಿ ಮಾಡಿದರು.

ಫೈಜಲ್ ಜತೆ ಸಿದ್ದರಾಮಯ್ಯ ಮತ್ತು ಜಮೀರ್ ಇರುವ ಫೋಟೊ ಪ್ರದರ್ಶಿ ಸಿದ ರವಿ, ‘ಈ ಫೋಟೊ ಏನನ್ನು ಹೇಳುತ್ತದೆ. ಯಾರದ್ದೋ ಜೊತೆ ಫೋಟೊ ತೆಗಿಸಿಕೊಂಡಂತಿಲ್ಲ. ಜನ್ಮಜನ್ಮಾಂತರದ ಸಂಬಂಧವಿರುವಂತಿದೆ. ಈ ಫೋಟೊ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು’ ಎಂದರು.

ADVERTISEMENT

‘ನಾನು ಜಮೀರ್‌ ಅವರನ್ನು ಪೆಡ್ಲರ್ ಅಂತ ಹೇಳಲ್ಲ. ಅಲ್ಪಸಂಖ್ಯಾತರ ಗುರಾಣಿ ಹಿಡಿದು ಅವರು ತಪ್ಪಿಸಿಕೊಳ್ಳುವುದು ಬೇಡ. ಷಡ್ಯಂತ್ರದ ಗುರಾಣಿ ಹಿಡಿಯುವುದು ಬೇಡ’ ಎಂದು ಜಮೀರ್ ವಿರುದ್ಧ ರವಿ ಕಿಡಿಕಾರಿದರು.

‘ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ’:‘ಡ್ರಗ್ಸ್ ವಿಚಾರದಲ್ಲಿ ನನ್ನ ಹೆಸರು ತಳುಕು ಹಾಕಿ, ರಾಜಕೀಯವಾಗಿ ಮುಗಿಸಲು ಯಾರಿಗೂ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್ ಖಾನ್‌ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಸಂಜನಾ ಜೊತೆ ಕೊಲಂಬೊಗೆ ನಾನು ಹೋಗಿದ್ದೆ ಎನ್ನುತ್ತಿದ್ದವರು ಈಗ ಅದನ್ನು ಬಿಟ್ಟು ಫೈಜಲ್ ಬಗ್ಗೆ ಮಾತನಾಡುತ್ತಿದ್ದಾರೆ. ಸಂಜನಾ ಜೊತೆ ಹೋಗಿದ್ದೆ ಎಂದಿರುವ ಸಂಬರಗಿ, ಒಂದು ಫೋಟೊ ತೋರಿಸಲಿ’ ಎಂದರು.

‘ನನಗೂ ಫೈಜಲ್‌ಗೂ ಸಂಪರ್ಕವಿಲ್ಲ. ಕಳ್ಳನೊಬ್ಬ ನನ್ನೊಡನೆ ಫೋಟೊ ತೆಗೆಸಿಕೊಂಡರೆ ನಾನು ಕಳ್ಳನಾಗುತ್ತೇನೆಯೇ?23 ವರ್ಷಗಳಿಂದ ಉಮ್ರಾಗೆ ಹೋಗುತ್ತಿದ್ದೇನೆ. ಅಲ್ಲಿಗೆ ಅವನೂ ಬಂದಿರಬಹುದು. ಡ್ರಗ್ಸ್ ಜಾಲದಲ್ಲಿ ಆತನ ಕೈವಾಡವಿದ್ದರೆ ಅವನಿಗೆ ಗಲ್ಲುಶಿಕ್ಷೆಯಾಗಲಿ’ ಎಂದರು

ಶಾಂತಿ-ನೆಮ್ಮದಿಗೆ ಹೋಗುತ್ತೇನೆ: ‘ಕೊಲಂಬೊಗೆ ನನ್ನ ಕುಟುಂಬದೊಂದಿಗೆ ಪ್ರವಾಸ ಹೋಗಿದ್ದೇನೆ. ಕುಮಾರಸ್ವಾಮಿ, ಜೆಡಿಎಸ್ ಶಾಸಕರ ಜತೆಗೂ ಹೋಗಿದ್ದೇನೆ. ಕೊಲಂಬೊಗೆ ಹೋದರೆ ಕ್ಯಾಸಿನೊಗೆ ಹೋದಂತೆ ಅರ್ಥವೇ. ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಪ್ರವಾಸ ಹೋಗುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.