ಸುನೀಲ್ ಕುಮಾರ್, ಸಿಎಂ ಜೊತೆ ಕೆ.ಗೋವಿಂದರಾಜ್ ಇದ್ದ ಸಂದರ್ಭ
ಬೆಂಗಳೂರು: ಕೆ. ಗೋವಿಂದರಾಜ್ ಕೊಟ್ಟ ಸಲಹೆ ಆಧರಿಸಿ ಆರ್ಸಿಬಿ ವಿಜಯೋತ್ಸವದ ಕಾರ್ಯಕ್ರಮ ನಡೆದಿದೆ ಎಂದಾದರೆ ಅದಕ್ಕೆ ತಾನೇ ಹೊಣೆಗಾರನಾಗುತ್ತೇನೆ ಎಂಬ ಭಯ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ ಎಂದು ಕಾರ್ಕಳ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸಿದ್ದರಾಮಯ್ಯನವರೇ, ನಿಮ್ಮ ‘ಸಯಾಮಿ‘ಯಂತೆ ಸದಾ ಅಂಟಿಕೊಂಡೇ ಇರುತ್ತಿದ್ದ ಕೆ.ಗೋವಿಂದರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಕೆ. ಗೋವಿಂದರಾಜ್ ನಿಮ್ಮ ಪಕ್ಕದಲ್ಲೇ ಕುಳಿತು ಕಾಲ್ತುಳಿತ ಎಂಬ ನರಹತ್ಯೆಯ ಚಿತ್ರಕತೆ ಬರೆದರೆಂಬ ಕಾರಣಕ್ಕೆ ನಿಮಗೆ ಭಯ ಕಾಡುತ್ತಿದೆಯೇ? ಸಾಲು ಸಾಲು ಹೆಣಗಳು ಬಿದ್ದ ಮೇಲೂ ಮಸಾಲೆ ದೋಸೆ ಮೆಲ್ಲುವುದಕ್ಕೆ ಕರೆದೊಯ್ದರು ಎಂಬ ಕಾರಣಕ್ಕೆ ಭಯ ಕಾಡುತ್ತಿದೆಯೇ? ಎಂದು ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ.
ಅಷ್ಟಕ್ಕೂ ಗೋವಿಂದರಾಜ್ ಎಸಗಿದ ತಪ್ಪೇನು ಎಂಬುದು ಜನರ ಮುಂದೆ ಅನಾವರಣವಾಗಬೇಕಲ್ಲವೇ? ಅದನ್ನು ಜನರಿಗೆ ವಿವರಿಸುವುದು ನಿಮ್ಮ ಕರ್ತವ್ಯವಲ್ಲವೇ? ಗೋವಿಂದ ರಾಜ್ ಗೇಟ್ ಪಾಸ್ಗೆ ಸಕಾರಣ ನೀಡಿದರೆ ಈ ಸಾವಿನ ಮೆರವಣಿಗೆಯ ಸತ್ಯ ಹೊರ ಬೀಳುತ್ತದೆ ಎಂದು ನೀವು ಗಾಢ ಮೌನಕ್ಕೆ ಜಾರಿದ್ದೀರಾ? ಎಂಬ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.