ADVERTISEMENT

ಅಕ್ರಮ ಗಣಿಗಾರಿಕೆ ಬೆಂಬಲಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 21:11 IST
Last Updated 25 ಜುಲೈ 2021, 21:11 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಸೇರಿದಂತೆ ತಮ್ಮ ಕುಟುಂಬದ ಯಾರೊಬ್ಬರೂ, ಯಾವತ್ತೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಒಳನೋಟ’ದಲ್ಲಿನ ವರದಿಯಲ್ಲಿ ತಮ್ಮ ಕುಟುಂಬದ ಬಗ್ಗೆ ಪ್ರಸ್ತಾಪವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಮಂಡ್ಯದಲ್ಲಿ ನಮ್ಮ ಪಕ್ಷ ತೊರೆದು ಬಿಜೆಪಿ ಸೇರಿದ ಸಚಿವ ಕೆ.ಸಿ. ನಾರಾಯಣ ಗೌಡ ಅವರು ನಮ್ಮ ಪಕ್ಷದ ಮುಖಂಡರ ವಿರುದ್ಧ ಸೇಡಿನ ಕ್ರಮಗಳನ್ನು ಕೈಗೊಂಡು, ಕಿರುಕುಳ ನೀಡಲಾರಂಭಿಸಿದ್ದರು. ಆಗ, ಪಕ್ಷದ ವರಿಷ್ಠರಾಗಿ ದೇವೇಗೌಡರು ಕಾರ್ಯಕರ್ತರ ಪರ ಮಾತನಾಡಿದ್ದರು. ಅದನ್ನೇ ಕ್ರಷರ್ ಪರವಾದ ಹೋರಾಟ ಎಂದು ಬಿಂಬಿಸಲಾಗಿತ್ತು’ ಎಂದು ಹೇಳಿದ್ದಾರೆ.

ಮಂಡ್ಯದ ಕೃಷ್ಣರಾಜ ಸಾಗರ ಅಣೆಕಟ್ಟೆ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿಚಾರದಲ್ಲೂ ತಾವು ಅಕ್ರಮ ಚಟುವಟಿಕೆಯನ್ನು ಬೆಂಬಲಿಸಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಅಕ್ರಮ ಗಣಿಗಾರಿಕೆ ಪರವಾದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಕ್ರಮ ತಡೆಯಬೇಕಿರುವುದು ಅಧಿಕಾರದಲ್ಲಿರುವವರು. ವಿರೋಧ ಪಕ್ಷದಲ್ಲಿರುವ ತಮ್ಮ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಜೆಡಿಎಸ್‌ ಪಕ್ಷವಾಗಲಿ, ದೇವೇಗೌಡರಾಗಲಿ ಅಥವಾ ನಾನಾಗಲಿ ಅಕ್ರಮ ಗಣಿಗಾರಿಕೆ ಪರ ನಿಲ್ಲವುದಿಲ್ಲ. ಅಕ್ರಮದಲ್ಲಿ ತೊಡಗಿರುವವರನ್ನು ಸರ್ಕಾರ ಈ ಕ್ಷಣವೇ ಬಂಧಿಸಲಿ. ಅದಕ್ಕೆ ನನ್ನ ಬೆಂಬಲವೂ ಇದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.