ADVERTISEMENT

ಪಕ್ಷಕ್ಕೆ ಶಕ್ತಿ ತುಂಬುವುದೇ ಗುರಿ -ಎಚ್‌.ಡಿ. ದೇವೇಗೌಡ

ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿ 25 ವರ್ಷ* ಪಕ್ಷದ ಕಚೇರಿಯಲ್ಲಿ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 16:39 IST
Last Updated 1 ಜೂನ್ 2021, 16:39 IST
ದೇವೇಗೌಡ
ದೇವೇಗೌಡ   

ಬೆಂಗಳೂರು: ‘ಜೆಡಿಎಸ್‌ ಪಕ್ಷಕ್ಕೆ ಶಕ್ತಿ ತುಂಬುವುದೇ ನನ್ನ ಮುಂದಿರುವ ಗುರಿ. ಇನ್ನು ನನ್ನ ಎಲ್ಲ ಶ್ರಮವನ್ನೂ ಅದಕ್ಕಾಗಿ ಮಾತ್ರ ಮೀಸಲಿಡುತ್ತೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ತಾವು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 25 ವರ್ಷಗಳಾದ ಪ್ರಯುಕ್ತ ಜೆಡಿಎಸ್‌ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಮಂಗಳವಾರ ಪಕ್ಷದ ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಎಲ್ಲ ಮುಖಂಡರನ್ನೂ ಒಟ್ಟಾಗಿ ಸೇರಿಸಿ ಪಕ್ಷವನ್ನು ಬಲಪಡಿಸುವ ನಿರ್ಣಯವನ್ನು ಈ ದಿನ ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ADVERTISEMENT

‘ನಮ್ಮದು ಪ್ರಾದೇಶಿಕ ಪಕ್ಷ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆಯೇ ನಾವು ಬೆಳೆಯಬೇಕಿದೆ. ಪಕ್ಷವನ್ನು ತ್ಯಜಿಸಿ ಹೋದವರ ಕುರಿತು ಮಾತನಾಡುವುದಿಲ್ಲ. ಆದರೆ, ಜೆಡಿಎಸ್ ಎಂದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರೇ ಎಂದಾಗಬಾರದು. ಇರುವ ಸಮರ್ಥ ನಾಯಕರನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಕುಮಾರಸ್ವಾಮಿ ಜತೆ ಚರ್ಚಿಸಿ ಪಕ್ಷದ ಎಲ್ಲ ಘಟಕಗಳಲ್ಲೂ ಬದಲಾವಣೆ ತರಲಾಗುವುದು’ ಎಂದು ಹೇಳಿದರು.

ಪಕ್ಷದ ರಾಜ್ಯ ಘಟಕವನ್ನೂ ಬಲಪಡಿಸಲಾಗುವುದು. ಎರಡು ತಿಂಗಳಿನಲ್ಲಿ ಹೊಸ ಘಟಕಗಳು ಅಸ್ತಿತ್ವಕ್ಕೆ ಬರಲಿವೆ. ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

ಲಾಕ್‌ಡೌನ್‌ ಮುಂದುವರಿದರೆ ಉತ್ತಮ

‘ಲಾಕ್‌ಡೌನ್‌ ಮುಂದುವರಿಸುವುದರಿಂದ ಕೋವಿಡ್‌ ನಿಯಂತ್ರಣ ಸಾಧ್ಯವಿದೆ. ಮೂವರು ಸಚಿವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಎಲ್ಲರೂ ಲಾಕ್‌ಡೌನ್‌ ಮುಂದುವರಿಸುವಂತೆ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವೂ ಇದೆ’ ಎಂದು ಎಚ್‌.ಡಿ. ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.