ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ
– ಎಕ್ಸ್ ಚಿತ್ರ
ನವದೆಹಲಿ: ಕರ್ನಾಟಕದಲ್ಲಿ ಸಿಬಿಐ ತನಿಖೆಗೆ ನೀಡಲಾಗಿದ್ದ ಮುಕ್ತ ಅನುಮತಿಯನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಬಿಜೆಪಿ ಟೀಕಿಸಿದೆ. ಇದು ವೃತ್ತಿಪರ ಕಳ್ಳರ ಹಾಗೂ ಲೂಟಿಕೋರ ಸರ್ಕಾರದ ನಿರ್ಧಾರ ಎಂದು ಛೇಡಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ‘ಈ ನಿರ್ಧಾರವು ಸ್ವತಃ ತಪ್ಪಿತಸ್ಥ ಮನಸ್ಸನ್ನು ಬಿಂಬಿಸುತ್ತದೆ’ ಎಂದರು.
‘ಮುಡಾ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿಯಾಗಿದೆ. ಅದಾದ ನಂತರ, ಯಾವುದೇ ಪ್ರಮಾಣೀಕೃತ ಕಳ್ಳ ಹಾಗೂ ಲೂಟಿಕೋರನ ರೀತಿಯಲ್ಲೇ ಕಾಂಗ್ರೆಸ್ ನಡೆದುಕೊಂಡಿದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ತನಿಖಾ ಸಂಸ್ಥೆಯ ಮುಕ್ತ ಅನುಮತಿಯನ್ನು ಹಿಂಪಡೆದಿದೆ’ ಎಂದರು.
‘ಕಾಂಗ್ರೆಸ್ ವೃತ್ತಿಪರ ಕಳ್ಳ ಮತ್ತು ವೃತ್ತಿಪರ ಭ್ರಷ್ಟ ಪಕ್ಷದಂತೆ ವರ್ತಿಸುತ್ತಿದೆ. ಮೊದಲು ತಪ್ಪು ಮಾಡಿ ನಂತರ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದೆ. ಇದು ಕರ್ನಾಟಕ ಸರ್ಕಾರದ ಧೋರಣೆ’ ಎಂದು ಅವರು ಟೀಕಿಸಿದರು.
‘₹5 ಸಾವಿರ ಕೋಟಿ ಹಗರಣದಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.