ತಿಪಟೂರು: ಭಾನುವಾರ ರಾತ್ರಿ ನಗರದ ಸತ್ಯ ಗಣಪತಿ ವಿಸರ್ಜನಾ ಮಹೋತ್ಸವ ವೀಕ್ಷಿಸಲು ಬಂದಿದ್ದಾಗ ಸಿಡಿಮದ್ದು ಬಡಿದು ಯುವತಿ ಮೃತಪಟ್ಟು, ಮತ್ತೊಬ್ಬ ಯುವಕ ತೀವ್ರ ಗಾಯಗೊಂಡಿದ್ದಾರೆ.
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹಡವನಹಳ್ಳಿ ಗ್ರಾಮದಮೈಕ್ಸೆಟ್ ರಾಜೇಗೌಡ ಎಂಬುವರ ಪುತ್ರಿ ಸಿತಾರಾ (21) ಮೃತ ಯುವತಿ.
ಭಾರಿ ಸ್ಫೋಟ ಮತ್ತು ಸದ್ದಿನ ಪಟಾಕಿ ಪ್ರದರ್ಶನ ವೇಳೆ ಸಿಡಿಮದ್ದೊಂದು ಹಾರಿ ಬಂದು ಈಕೆಯ ತಲೆಗೆ ಬಡಿಯಿತು. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕುಸಿದುಬಿದ್ದರು. ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ತುಮಕೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯೆ ಮೃತಪಟ್ಟರು.
ಇದೇ ಸಂದರ್ಭದಲ್ಲಿ ಸಿಡಿಮದ್ದು ಬಡಿದು ತಿಪಟೂರು ತಾಲ್ಲೂಕು ಮತ್ತಿಹಳ್ಳಿ ಗ್ರಾಮದ ಜಿತೇಂದ್ರ (19) ಎಂಬುವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಗಣೇಶೋತ್ಸವ ಸಮಿತಿ, ಪಟಾಕಿ ತಯಾರಕರು ಹಾಗೂ ಪಟಾಕಿ ಸಿಡಿಸಿದವರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.