ADVERTISEMENT

ಡೆತ್‌ನೋಟ್‌ ಮಾಹಿತಿ: ಬಯಲಾಯ್ತು ಮಹಿಳಾ ಕಾನ್‌ಸ್ಟೆಬಲ್‌ ಕೊಲೆ

ತುಮಕೂರು ಜಿಲ್ಲೆಯ ಕೆಸರಗೊಂಡನಹಳ್ಳಿಯ ಯುವಕ ಲಾಡ್ಜ್‌ನಲ್ಲಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 16:25 IST
Last Updated 17 ಸೆಪ್ಟೆಂಬರ್ 2022, 16:25 IST
   

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹತ್ತಿರ ಇರುವ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ತುಮಕೂರು ಜಿಲ್ಲೆಯ ಕೆಸರಗೊಂಡನಹಳ್ಳಿಯ ಮಂಜುನಾಥ್‌ (26) ಬರೆದಿದ್ದ ಡೆತ್‌ನೋಟ್‌ನಲ್ಲಿ ಇದ್ದ ಮಾಹಿತಿ ಅರಸಿ ಹೋದ ಪೊಲೀಸರಿಗೆ, ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ಕೊಲೆಯಾಗಿರುವಸಂಗತಿ ತಿಳಿದಿದೆ.

ತುಮಕೂರು ಜಿಲ್ಲೆ ಹುಳಿಯಾರು ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸುಧಾ ಸೆಪ್ಟೆಂಬರ್ 13ರಂದು ಕಾಣೆಯಾಗಿದ್ದರು. ಕೆಲಸ ಮುಗಿಸಿ ಮನೆಗೆ ಹೋದವರು ವಾಪಸ್ ಬಂದಿರಲಿಲ್ಲ. ಹೀಗಾಗಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸುಧಾ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಎರಡು ವರ್ಷಗಳ ಹಿಂದೆ ಸುಧಾ ಪತಿ ಸಾವನ್ನಪ್ಪಿದ್ದರು.

ಈಗ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮೈಲನಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ 206ರ ಬದಿಯಲ್ಲಿ ಸುಧಾ ಶವ ಪತ್ತೆಯಾಗಿದೆ.

ADVERTISEMENT

ಡೇತ್‌ನೋಟ್‌ನಲ್ಲಿ ಕೊಲೆ ಮಾಹಿತಿ:

ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ ಡೆತ್‌ನೋಟ್ ಬರೆದಿಟ್ಟಿದ್ದು ಅದರಲ್ಲಿ ‘ನನ್ನ ದೊಡ್ಡಮ್ಮನ ಮಗಳಾದ ಸುಧಾ ತನ್ನ ಗಂಡನನ್ನು ಅವಳ ಸ್ನೇಹಿತನ ಜೊತೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಳು. ಈ ವಿಷಯವಾಗಿ ಆಕೆಯ ಮೇಲೆ ಕೋಪ ಬಂದಿದ್ದು, ಸುಧಾಳನ್ನು ಕೊಲೆ ಮಾಡಿ ಬೀದಿ ಹೆಣ ಮಾಡಿರುತ್ತೇನೆ' ಎಂದು ಅದರಲ್ಲಿ ಉಲ್ಲೇಖಿಸಿದ್ದನು. ಅದನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಮಂಜುನಾಥ ಕಳೆದ ಸೆಪ್ಟೆಂಬರ್ 13ರಂದು ಲಾಡ್ಜ್‌ನಲ್ಲಿ ಕೊಠಡಿ ಬಾಡಿಗೆ ಪಡೆದಿದ್ದು, ಒಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರ್ವಾಸನೆ ಬರುತ್ತಿದ್ದ ಕಾರಣ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶುಕ್ರವಾರ ಕೊಠಡಿ ಬಾಗಿಲು ತೆಗೆದಾಗ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿತ್ತು ಈ ಬಗ್ಗೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.