ಶಿವಮೊಗ್ಗ: ಕರ್ನಾಟಕ ಯಕ್ಷಗಾನ ಅಕಾಡೆಮಿ ಇದೇ ಮೊದಲ ಬಾರಿ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.
10 ಸಾಧಕರಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ತಲಾ ₨ 25 ಸಾವಿರ ನಗದು, ಫಲಕ ಒಳಗೊಂಡಿರುತ್ತದೆ. ಪ್ರತಿ ವರ್ಷವೂ ನೀಡಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗಜಾನನ ಗಣಪತಿ ಭಟ್ಟ ಹೊಸ್ತೋಟ, ಮಹಾದೇವ ಈಶ್ವರ ಹೆಗಡೆ (ಉತ್ತರ ಕನ್ನಡ), ಮೋಹನ್ ಶೆಟ್ಟಿಗಾರ್, ಜಮದಗ್ನಿ ಶೀನನಾಯ್ಕ, ಜಂಬೂರು ರಾಮಚಂದ್ರ ಶಾನುಭಾಗ್ (ಉಡುಪಿ), ಪೂಕಳ ಲಕ್ಷ್ಮೀನಾರಾಯಣ ಭಟ್ (ದಕ್ಷಿಣ ಕನ್ನಡ), ಎ.ಎಸ್. ಲಕ್ಷ್ಮಣಯ್ಯ (ತುಮಕೂರು), ಹರಿದಾಸ ನೀವಣೆ ಗಣೇಶಭಟ್ಟ (ಹುಬ್ಬಳ್ಳಿ), ಎಲ್. ಶಂಕರಪ್ಪ (ಬೆಂಗಳೂರು ಗ್ರಾಮಾಂತರ) ಹಾಗೂ ಟಿ.ಎಸ್. ರವೀಂದ್ರ (ಮೈಸೂರು) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
23ರಂದು ಶಿವಮೊಗ್ಗದಲ್ಲಿ ಪ್ರದಾನ:
2017ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರ ಪ್ರಶಸ್ತಿ, ಪುಸ್ತಕ ಬಹುಮಾನಗಳ ಜತೆಗೆ ಯಕ್ಷಸಿರಿ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು. ಫೆ. 23ರಂದು ಸಂಜೆ 6ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆಎಂದು ಹೆಗಡೆ ವಿವರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.