ADVERTISEMENT

ಪುತ್ತೂರು: 19ರಂದು ಮೋದಿಗಾಗಿ ವೈದ್ಯನಿಂದ ದೇವಿಗೆ ಬಯಲಾಟ ಸಮರ್ಪಣೆ

ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಹರಕೆ ಹೊತ್ತಿದ್ದ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 14:10 IST
Last Updated 14 ಫೆಬ್ರುವರಿ 2020, 14:10 IST
 ಸೇವಾ ಬಯಲಾಟದ ಬ್ಯಾನರ್
 ಸೇವಾ ಬಯಲಾಟದ ಬ್ಯಾನರ್   

ಪುತ್ತೂರು: ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದ ಅಭಿಮಾನಿ ವೈದ್ಯರೊಬ್ಬರು ಕೋರಿಕೆಯನ್ನು ಈಡೇರಿಸಿದ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಹರಕೆಯ ಯಕ್ಷಗಾನ ಬಯಲಾಟ ಸೇವೆಯನ್ನು ಸಮರ್ಪಣೆ ಮಾಡಲಿದ್ದಾರೆ. ಇದೇ 19ರಂದು ಪುತ್ತೂರು ನಗರದ ಬೊಳುವಾರು ಬೈಲ್‌ನಲ್ಲಿ `ಶ್ರೀ ದೇವಿ ಮಹಾತ್ಮೆ' ಸೇವಾ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯುವುದು.

ಕಾಸರಗೋಡು ತಾಲ್ಲೂಕಿನ ಬಂದಡ್ಕದಲ್ಲಿ ನರ್ಸಿಂಗ್‌ ಹೋಮ್ ನಡೆಸುತ್ತಿರುವ ಬೊಳುವಾರು ಬೈಲು ನಿವಾಸಿ ಡಾ. ಉದಯಶಂಕರ್ ಭಟ್ ಮತ್ತು ಅವರ ಪತ್ನಿ ದೀಪಶ್ರೀ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಬಹುಮತ ದೊರೆತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಕಟೀಲು ದೇವಿಗೆ ಸಂಕಲ್ಪ ಪ್ರಾರ್ಥನೆ ಮಾಡಿದ್ದರು. ಕೋರಿಕೆ ಈಡೇರಿಸಿದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಸೇವಾ ರೂಪದಲ್ಲಿ ಆಡಿಸುವುದಾಗಿ ಹರಕೆ ಹೊತ್ತಿದ್ದರು.

ಬಿಜೆಪಿ ಬಹುಮತದೊಂದಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾದ ಪ್ರಯುಕ್ತ ಅವರು ಕಟೀಲು ಅಮ್ಮನವರಿಗೆ ಹರಕೆಯಂತೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆಯನ್ನು ಸಮರ್ಪಣೆ ಮಾಡುತ್ತಿದ್ದಾರೆ. ಪುತ್ತೂರಿನ ಬೊಳುವಾರು ಬೈಲ್‌ ನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಸಪರಿವಾರ ಕ್ಷೇತ್ರದ ಬಳಿ ಈ ಸೇವಾ ಯಕ್ಷಗಾನ ಬಯಲಾಟ ನಡೆಯಲಿದೆ.

ಹರಕೆ ಬಯಲಾಟದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿದೆ. ಅಂದು ಸಂಜೆ 6.30ರಿಂದ ರಾತ್ರಿ 8.30ರವರೆಗೆ ಡಾ. ಉದಯಶಂಕರ್ ಭಟ್ ಮತ್ತು ದೀಪಶ್ರೀ ದಂಪತಿಯ ಪುತ್ರಿ ತನ್ವಿಯವರಿಂದ ಭರತನಾಟ್ಯ ಏರ್ಪಡಿಸಲಾಗಿದೆ. ರಾತ್ರಿ ಚೌಕಿ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುವುದು .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.