ADVERTISEMENT

ಯಶಸ್ವಿನಿ ಯೋಜನೆ: ವಾರದೊಳಗೆ ಆಸ್ಪತ್ರೆಗಳಿಗೆ ಬಿಲ್ ಪಾವತಿ– ಕೆ.ಎನ್‌.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 15:52 IST
Last Updated 30 ಜನವರಿ 2024, 15:52 IST
ಕೆ.ಎನ್‌.ರಾಜಣ್ಣ
ಕೆ.ಎನ್‌.ರಾಜಣ್ಣ   

ಬೆಂಗಳೂರು: ‘ಯಶಸ್ವಿನಿ’ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಿದ ಒಂದು ವಾರದೊಳಗೆ ಬಿಲ್‌ ಪಾವತಿ ಮಾಡುವ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ಈ ಹಿಂದೆ ಸುಮಾರು ₹25 ಕೋಟಿಯಷ್ಟು ಬಾಕಿ ಉಳಿದಿತ್ತು. ಇದರಿಂದ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು. ಈಗ ಆ ಸಮಸ್ಯೆ ನಿವಾರಿಸಲಾಗಿದೆ. ರೋಗಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ ವಿವರಿಸಿದರು.

ಅಲ್ಲದೇ, ಯಶಸ್ವಿನಿ ಯೋಜನೆಯ ಚಿಕಿತ್ಸಾ ದರವನ್ನು ಕೇಂದ್ರ ಸರ್ಕಾರದ ಆಯುಷ್ಮಾನ್‌ ದರಕ್ಕೆ ಸರಿ ಸಮಾನವಾಗಿ ಪರಿಷ್ಕರಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿವೆ. ರಾಜ್ಯ ಸರ್ಕಾರ 15–20 ವರ್ಷಗಳಷ್ಟು ಹಿಂದೆ ದರ ನಿಗದಿ ಮಾಡಿತ್ತು. ದರವು ತುಂಬಾ ಕಡಿಮೆ ಇತ್ತು. ದರ ಪರಿಷ್ಕರಿಸುವಂತೆ ಖಾಸಗಿ ಆಸ್ಪತ್ರೆಗಳೂ ಒತ್ತಾಯ ಮಾಡಿದ್ದವು ಎಂದು ರಾಜಣ್ಣ ಹೇಳಿದರು.

ADVERTISEMENT

ಈ ಹಿಂದೆ ಯಶಸ್ವಿನಿ ಯೋಜನೆಯನ್ನು ನಿಲ್ಲಿಸಿದ ನಂತರ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಪಾವತಿ ಮಾಡಿರಲಿಲ್ಲ. ಇದರಿಂದ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಕೆಲವು ಆಸ್ಪತ್ರೆಗಳು ಹಿಂದೇಟು ಹಾಕಿದ್ದವು. ಈಗ ಆ ಸಮಸ್ಯೆ ಪರಿಹಾರವಾಗಿದ್ದು ರಾಜ್ಯದ ಎಲ್ಲೆಡೆ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯಡಿ ಜನರಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.