ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಜುಲೈ ತಿಂಗಳಲ್ಲಿ ಮಾಡಿದ ಎಲ್ಲ ವರ್ಗಾವಣೆ ಮತ್ತು ಕಾಮಗಾರಿಗಳನ್ನು ರದ್ದು ಮಾಡಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಶುಕ್ರವಾರ ಸಂಜೆ ಈಕುರಿತು ಹೇಳಿಕೆ ನೀಡಿದ್ದು, ‘ಜುಲೈ ತಿಂಗಳಲ್ಲಿ ಅನುಮೋದನೆಗೊಂಡಿರುವ ಎಲ್ಲ ಹೊಸ ಕಾಮಗಾರಿಗಳ ಸಂಬಂಧಿತ ಆದೇಶಗಳನ್ನು ಮುಂದಿನ ಆದೇಶ ಆಗುವವರೆಗೆ ತಡೆಹಿಡಿಯುವಂತೆ ಸರ್ಕಾರದ ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲು ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ.
‘ಜುಲೈ ತಿಂಗಳಲ್ಲಿ ವರ್ಗಾವಣೆಗೊಂಡು ಜಾರಿಯಾಗದೆ ಇರುವ ಆದೇಶಗಳನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಬೇಕು ಹಾಗೂ ಚಾಲನೆಗೊಳ್ಳದಿರುವ ವರ್ಗಾವಣೆ ಆದೇಶಗಳ ಪ್ರಸ್ತಾವನೆಗಳನ್ನು ಮುಂದಿನ ಆದೇಶದವರೆಗೆ ಚಾಲನೆಗೊಳಿಸಬಾರದು. ನಿಯೋಜಿತ ಮುಖ್ಯಮಂತ್ರಿಗಳ ಆದೇಶವನ್ನು ಪಾಲಿಸಬೇಕು’ ಎಂದು ಅವರು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.