ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಸ್ಥಾನ ಸಿಗದ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಕೊಂಚ ಸಮಯ ಬೇಸರಗೊಂಡಿದ್ದರು.
ಮಂಗಳವಾರ ರಾತ್ರಿ ಬಹಳ ಹೊತ್ತಿನವರೆಗೆ ಬಸವರಾಜ ಬೊಮ್ಮಾಯಿ ಮೂಲಕ ತಮ್ಮ ಪುತ್ರನ ಪರವಾಗಿ ಒತ್ತಡ ಹೇರಿದ್ದ ಯಡಿಯೂರಪ್ಪ ಅವರು, ಬುಧವಾರ ಹೊರಬಿದ್ದ ಪಟ್ಟಿಯಲ್ಲಿ ಪುತ್ರನ ಹೆಸರು ಕಾಣಿಸಿಕೊಳ್ಳದ ಕಾರಣಕ್ಕೆ ಅಸಮಾಧಾನಗೊಂಡಿದ್ದರು.
ಯಡಿಯೂರಪ್ಪ ದುಡುಕಿನ ನಿರ್ಧಾರ ತೆಗೆದುಕೊಂಡು ಪಕ್ಷಕ್ಕೆ ಘಾಸಿ ಮಾಡಿದರೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಜತೆಗೆ ದೂರವಾಣಿ ಮೂಲಕ ಮಾತನಾಡಿ ಸಮಾಧಾನಗೊಳಿಸಿದರು. ‘ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರಿಗೆ ಅವಕಾಶ ನೀಡಲಾಗುವುದು. ಈಗ ತಾಳ್ಮೆವಹಿಸಿ’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ನೆರಳಿನಿಂದ ಹೊರಬಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂಬ ಸೂಚನೆಯನ್ನೂ ವರಿಷ್ಠರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನೀಡಿದ್ದಾರೆ. ಅವರ ನಿರ್ದೇಶನದ ಅನ್ವಯ ಬೊಮ್ಮಾಯಿ ಬೆಳಿಗ್ಗೆ ದೆಹಲಿಯಿಂದ ಮರಳಿದ ಬಳಿಕ ನೇರವಾಗಿ ಯಡಿಯೂರಪ್ಪ ಅವರ ಮನೆಗೆ ಹೋಗದೇ ವಿಧಾನಸೌಧಕ್ಕೆ ತೆರಳಿದರು. ಹಿಂದೆಲ್ಲ ಯಾವುದೇ ಕೆಲಸಕ್ಕೂ ಮೊದಲು ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡುತ್ತಿದ್ದರು.
ಸಚಿವರ ಪಟ್ಟಿ ಬಿಡುಗಡೆ ಆದ ಬಳಿಕ ಮತ್ತು ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ಕೆಲವು ಹಿರಿಯ ಶಾಸಕರ ಜತೆ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.