ಬೆಂಗಳೂರು: ದೇಹ, ಮನಸ್ಸು ಹಾಗೂ ಭಾವನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದೇ ಸಂತೋಷಭರಿತ ಜೀವನದ ಕೀಲಿಕೈ ಎಂದು ಈಶ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.
ನಗರದ ಕ್ರೈಸ್ಟ್ ಕಾಲೇಜಿನಲ್ಲಿ ಇತ್ತೀಚೆಗೆ ‘ಯೂತ್ ಆ್ಯಂಡ್ ಟ್ರುತ್’ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
‘ಮನುಷ್ಯ ಈ ಭೂಮಿಯ ಮೇಲಿನ ಅತ್ಯಂತ ಜಟಿಲ ಹಾಗೂ ಸೂಕ್ಷ್ಮ ಯಂತ್ರ. ಆ ಯಂತ್ರದ ಬಳಕೆದಾರರ ಕೈಪಿಡಿಯನ್ನು ಸರಿಯಾಗಿ ಓದಿಕೊಳ್ಳಬೇಕು. ಅಂದರೆ ಬದುಕಿನ ಆರಂಭದ ಹಂತದಲ್ಲಿಯೇ ನಮ್ಮ ಉದ್ದೇಶಗಳನ್ನು ತಿಳಿದುಕೊಂಡಿರಬೇಕು. ಕೊನೆಯ ಘಳಿಗೆಯಲ್ಲಿ ಅರಿಯಲು ಹೋದರೆ ಏನೂ ಪ್ರಯೋಜನವಾಗದು’ ಎಂದರು.
ಆತ್ಮಗೌರವ ವೃದ್ಧಿಸುವ ಕುರಿತು ಮಾತನಾಡಿದ ವಾಸುದೇವ್, ‘ನಮಗೆ ಗೌರವ ಯಾಕೆ ಬೇಕು? ನಾವು ಇನ್ನೊಬ್ಬರಿಗಿಂತ ಸದಾ ಒಂದು ಕೈ ಮೇಲೆ ಎಂದು ತೋರಿಸುವುದೇ ಗೌರವ ಎಂದು ಭಾವಿಸುತ್ತೇವೆ. ಅಂದರೆ ಬೇರೆಯವರು ನಮಗಿಂತ ಕೆಳಗಿದ್ದಾಗ ಖುಷಿ ಎಂದುಕೊಳ್ಳುತ್ತೇವೆ. ಇದು ಆತ್ಮಗೌರವ ಅಲ್ಲ. ಅದು ಕಾಯಿಲೆ. ಇದು ತೊಲಗಬೇಕು. ಸೃಷ್ಟಿಯ ಮೂಲವು ನಮ್ಮನ್ನೂ ಇರುವೆಯನ್ನೂ ಒಂದೇ ಬಗೆ ಎಂದು ಭಾವಿಸಿದೆ. ಹಾಗಿರುವಾಗ ನಾವು ಮಾತ್ರ ಶ್ರೇಷ್ಠ ಎಂದು ಹೇಗೆ ಭಾವಿಸಲು ಸಾಧ್ಯ? ಮನುಷ್ಯ ಈ ಪ್ರಪಂಚದ ಕೇಂದ್ರಬಿಂದು ಅನ್ನುವುದು ಮೂರ್ಖ ವಾದ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.