ADVERTISEMENT

ಪೌರತ್ವ ಕಾಯ್ದೆ ವಿರುದ್ಧ ತಣಿಯದ ಆಕ್ರೋಶ : ಬಿಎಸ್‌ವೈಗೂ ತಟ್ಟಿದ ಪ್ರತಿಭಟನೆ ಬಿಸಿ

ವಿ.ವಿ ಘಟಿಕೋತ್ಸವಕ್ಕೆ ತೆರಳುತ್ತಿದ್ದ ಪ.ಬಂಗಾಳ ರಾಜ್ಯಪಾಲ ಧನಕರ್‌ಗೆ ತಡೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 2:25 IST
Last Updated 25 ಡಿಸೆಂಬರ್ 2019, 2:25 IST
ಕೋಲ್ಕತ್ತದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಾಗಟೆ ಬಾರಿಸಿ ಗಮನ ಸೆಳೆದರು –ಪಿಟಿಐ ಚಿತ್ರ
ಕೋಲ್ಕತ್ತದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಾಗಟೆ ಬಾರಿಸಿ ಗಮನ ಸೆಳೆದರು –ಪಿಟಿಐ ಚಿತ್ರ   

ನವದೆಹಲಿ/ಕೋಲ್ಕತ್ತ: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ದೇಶದ ವಿವಿಧೆಡೆ ಮಂಗಳವಾರವೂ ಪ್ರತಿಭಟನೆಗಳು ನಡೆದಿವೆ.

ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಎನ್‌ಆರ್‌ಸಿಯನ್ನು ಜ.26ರ ಒಳಗಾಗಿ ಹಿಂಪಡೆಯಲು ನ್ಯಾಷನಲ್‌ ಯಂಗ್‌ ಇಂಡಿಯಾ ಕೋ–ಆರ್ಡಿನೇಷನ್‌ ಆ್ಯಂಡ್‌ ಕ್ಯಾಂಪೇನ್‌ (ಎನ್‌ವೈಐಸಿಸಿ) ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.

ರಾಹುಲ್, ಪ್ರಿಯಾಂಕಾಗೆ ತಡೆ: ಪ್ರತಿಭಟನೆ ವೇಳೆ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಲು ಉತ್ತರ ಪ್ರದೇಶದ ಮೀರಠ್‌ಗೆ ತೆರಳುತ್ತಿದ್ದ ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಾರ್ಥಾಪುರ್ ಪೊಲೀಸ್ ಠಾಣೆ ಬಳಿ ಪೊಲೀಸರು ಮಂಗಳವಾರ ತಡೆದರು.

ADVERTISEMENT

ದೂರು ದಾಖಲು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸುವ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಅವರ ವಿರುದ್ಧ ಅಲಿಗಡದಲ್ಲಿ ವಕೀಲ ಪ್ರದೀಪ್ ಗುಪ್ತಾ ಎಂಬುವವರು ದೂರು ದಾಖಲಿಸಿದ್ದಾರೆ.

ಬಿಎಸ್‌ವೈಗೆ ಕಪ್ಪುಬಾವುಟ: ಕಣ್ಣೂರು ಜಿಲ್ಲೆಯ ತಾಲಿಪರಂಬದಲ್ಲಿನ ರಾಜರಾಜೇಶ್ವರಿ ಮತ್ತು ಮಾದಯಿಕಾವು ದೇವಾಲಯಗಳಿಗೆ ತೆರಳಲು ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿದರು.

ಕಣ್ಣೂರು ಸಮೀಪದ ಪಳಯಾಂಗಡಿಯಲ್ಲೂ ಯಡಿಯೂರಪ್ಪ ಅವರ ಕಾರನ್ನು ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ, ಡಿವೈಎಫ್‌ಐ ಸಂಘಟನೆಗಳ ಕಾರ್ಯಕರ್ತರು ತಡೆದಿದ್ದರು. ಈ ಸಂಬಂಧ 23 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.