ಇಸ್ಲಾಮಾಬಾದ್ (ಪಿಟಿಐ): ಪೆಶಾವರದ ವಾಯವ್ಯ ಭಾಗದಲ್ಲಿ ಭಾನುವಾರ ನಡೆದ ಆತ್ಮಾಹುತಿ ದಾಳಿಯಲ್ಲಿ 15 ಜನರ ಹತ್ಯೆಯಾಗಿದ್ದು, 32 ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಹಿರಿಯ ರಾಜಕಾರಣಿಯೊಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.
ಪೆಶಾವರದ ಬದಭೇರ್ ಪ್ರದೇಶದಲ್ಲಿನ ಸ್ಥಳೀಯ ರಾಜಕಾರಣಿಯೊಬ್ಬರ ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಖೈಬರ್ ಪ್ರಾಂತ್ಯದ ಉಪ ಸಭಾಪತಿ ಖುಷ್ದಿಲ್ ಖಾನ್ ಅವರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿತ್ತು. ಆದರೆ ಅಂತ್ಯಕ್ರಿಯೆ ಬಳಿಕ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅವರು ತೆರಳಿದ ಕೆಲವೇ ನಿಮಿಷಗಳಲ್ಲಿ ಈ ಘಟನೆ ಸಂಭವಿಸಿದೆ.
ತಾಲಿಬಾನಿಗಳ ವಿರುದ್ಧ ಉಗ್ರ ಟೀಕಾಪ್ರಹಾರ ನಡೆಸುತ್ತಿದ್ದ ಖಾನ್ ಅವರನ್ನು ಗುರಿಯಾಗಿಟ್ಟುಕೊಳ್ಳಲಾಗಿತ್ತು. ಸ್ಫೋಟ ಸಂಭವಿಸುವ 10 ನಿಮಿಷಗಳ ಮುಂಚೆಯೇ ಅವರು ಅಲ್ಲಿಂದ ತೆರಳಿದ್ದರು ಎಂದು ಪೆಶಾವರದ ಪೊಲೀಸ್ ಮುಖ್ಯಸ್ಥ ಇಮ್ತಿಯಾಜ್ ಅಲ್ತಾಫ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರ ಸ್ಥಿತಿ ಗಂಭೀರವಾಗ್ದ್ದಿದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿಯ ಕಾಲು ಮತ್ತು ತಲೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಕ್ತಿಶಾಲಿ ಸ್ಫೋಟದಿಂದಾಗಿ ಹಲವು ವಾಹನಗಳು ಜಖಂಗೊಡಿವೆ. ಭದ್ರತಾ ಪಡೆಗಳು ಈ ಜಾಗದಲ್ಲಿ ಬೀಡುಬಿಟ್ಟಿದ್ದು, ಶೋಧ ಕಾರ್ಯಾಚರಣೆ ನಡೆಸಿವೆ. ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.