ಬೀಜಿಂಗ್: ಭಾರತ ಹಾಗೂ ಪಾಕಿಸ್ತಾನ ಸೇರ್ಪಡೆಯಿಂದ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸಹಕಾರ ವೃದ್ಧಿಯಾಗಿದ್ದು, ಅಂತರರಾಷ್ಟ್ರೀಯ ಸಮುದಾಯದ ನಿರೀಕ್ಷೆಗಳೂ ಹೆಚ್ಚಾಗಿವೆ ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹೇಳಿದ್ದಾರೆ.
ಸಂಘಟನೆಯ ಭದ್ರತಾ ಮಂಡಳಿಯ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆ ರಚನೆಯಾದಾಗಿನಿಂದ ಪ್ರಾದೇಶಿಕ ಭದ್ರತೆ ಹಾಗೂ ಸ್ಥಿರತೆ ಆದ್ಯತೆಯ ವಿಷಯಗಳಾಗಿವೆ ಎಂದಿದ್ದಾರೆ.
‘ಸಂಘಟನೆಯ ಸದಸ್ಯ ರಾಷ್ಟ್ರಗಳು ಮೂರು ದುಷ್ಟಶಕ್ತಿಗಳಾದ ಭಯೋತ್ಪಾದನೆ, ಪ್ರತ್ಯೇಕತಾವಾದ ಹಾಗೂ ತೀವ್ರವಾದದ ವಿರುದ್ಧ ಹೋರಾಡುತ್ತ ಬಂದಿವೆ. ಗಂಭೀರ ವಿಷಯಗಳಿಂದ ಉಂಟಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ತಡೆದಿವೆ. ಪ್ರಾದೇಶಿಕ ಶಾಂತಿ, ಅಭಿವೃದ್ಧಿ ಹಾಗೂ ಸಮೃದ್ಧತೆಗೆ ಕೊಡುಗೆ ನೀಡುತ್ತಾ ಬಂದಿವೆ’ ಎಂದು ಷಿ ಹೇಳಿದರು.
ಭಾರತ ಹಾಗೂ ಪಾಕಿಸ್ತಾನ ಕಳೆದ ವರ್ಷ ಸಂಘಟನೆಯ ಸದಸ್ಯರಾಗಿ ಸೇರ್ಪಡೆಯಾಗಿದ್ದವು. ಜೂನ್ 9,10ರಂದು ಚೀನಾದ ಕ್ವಿಂಗ್ಡೊನಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ನಡೆಯಲಿದ್ದು, ಮೋದಿ ಅವರು ಭಾಗಿಯಾಗುವ ಸಾಧ್ಯತೆಯಿದೆ.
**
ಉಗ್ರವಾದದ ವಿರುದ್ಧ ಹೋರಾಟಕ್ಕೆ ಸಿದ್ಧ
ಇಸ್ಲಾಮಾಬಾದ್: ಯಾವುದೇ ಧರ್ಮ, ದೇಶ ಅಥವಾ ರಾಷ್ಟ್ರೀಯತೆಯ ಮೂಲಕ ಭಯೋತ್ಪಾದನೆಯನ್ನು ಗುರುತಿಸಬಾರದು ಎಂದು ಪಾಕಿಸ್ತಾನ ಹೇಳಿದೆ. ಪ್ರಾದೇಶಿಕ ದೇಶಗಳ ಜೊತೆ ಸೇರಿ ಉಗ್ರವಾದದ ವಿರುದ್ಧ ಹೋರಾಟ ನಡೆಸಲು ಸಿದ್ಧ ಎಂದು ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಅದು ತಿಳಿಸಿದೆ. ಈ ಸಭೆಯಲ್ಲಿ ಭಾರತವೂ ಭಾಗಿಯಾಗಿತ್ತು.
ಭಯೋತ್ಪಾದನೆಯಿಂದ ಪಾಕಿಸ್ತಾನವು ಸಾವಿರಾರು ನಾಗರಿಕರು, ಭದ್ರತಾ ಸಿಬ್ಬಂದಿಯನ್ನು ಕಳೆದುಕೊಂಡಿದೆ. ದೇಶದ ಆರ್ಥಿಕತೆಗೆ ಸುಮಾರು ₹80 ಲಕ್ಷ ಕೋಟಿ ರೂಪಾಯಿಯಷ್ಟು ಆರ್ಥಿಕ ಹೊಡೆತ ಬಿದ್ದಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತಹಮಿನಾ ಜನುವಾ ಹೇಳಿದ್ದಾರೆ. ಈ ವಿಚಾರವಾಗಿ ಸಂಘಟನೆಯು ಪಾಕಿಸ್ತಾನದತ್ತ ವಿಶೇಷ ಗಮನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.