ADVERTISEMENT

ಕವಿ ಷಹರ್ಯಾರ್‌ಗೆ ನೂರ್ ಎ ವತನ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಲಂಡನ್ (ಪಿಟಿಐ): ಗಜಲ್ ಹಾಗೂ ನಜ್ಮ್ ರಚನಾಕಾರ ಷಹರ್ಯಾರ್‌ಗೆ ಆಲಿಗಢ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ಇಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಿದೆ.

ಷಹರ್ಯಾರ್ ಕಾವ್ಯನಾಮದಿಂದ ಖ್ಯಾತರಾಗಿರುವ 75ರ ಹರೆಯದ ಅಖಲಾಖ್ ಮಹಮ್ಮದ್ ಖಾನ್ ಉರ್ದು ಕಾವ್ಯ ಲೋಕ ಹಾಗೂ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಲಂಡನ್‌ನಲ್ಲಿರುವ ಆಲಿಗಢ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು `ನೂರ್ ಎ ವತನ್~ (ರಾಷ್ಟ್ರ ರತ್ನ) ಪ್ರಶಸ್ತ್ನಿ ನೀಡಿ ಗೌರವಿಸಿದೆ.

ಷಹರ್ಯಾರ್ ಅವರು `ಫಾಸ್ಲೆ~, `ಅಂಜುಮನ್~ ಹಾಗೂ `ಗಮನ್~ ಮುಂತಾದ ಚಿತ್ರಗಳಿಗೆ   ಗೀತೆಗಳನ್ನೂ ರಚಿಸಿದ್ದಾರೆ. ಮುಝಫರ್ ಅಲಿ ಅವರ `ಉಮರಾವ್ ಜಾನ್~ ಚಿತ್ರಕ್ಕಾಗಿ ಎಲ್ಲಾ ವಯೋಮಾನದವರ ಅಭಿರುಚಿಗೆ ಸಲ್ಲುವ ಪ್ರೀತಿ ಪ್ರೇಮ, ವಿರಹಗಳ ದಟ್ಟ ಭಾವವಿರುವ ಗಜಲ್ ಹಾಗೂ ನಜ್ಮ್‌ಗಳ ರಚನೆಯಿಂದ ಗಮನ ಸೆಳೆದವರು.

ಅ.17ರಂದು ಆಲಿಗಢ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸಯ್ಯದ್ ಅಹಮ್ಮದ್‌ಖಾನ್ ಅವರ ಜನ್ಮದಿನದ ಅಂಗವಾಗಿ ಸರ್ ಸಯ್ಯದ್ ದಿನಾಚರಣೆಯನ್ನು ವಿಶ್ವದ ಎಲ್ಲೆಡೆಯೂ ಆಚರಿಸಲಾಗುತ್ತದೆ.  ಇದರ ಪ್ರಯುಕ್ತ ಇಲ್ಲಿನ ವೈಎಂಸಿಎಯ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಷಹರ್‌ರ್ಯಾರ್‌ಗೆ ಈ ಪ್ರಶಸ್ತಿ ನೀಡಲಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಷಹರ್ಯಾರ್ ಉತ್ತರಪ್ರದೇಶದ ಬರೇಲಿಯಲ್ಲಿ ಜನಿಸಿದ್ದು, `ಅಂಜುಮನ್ ತರಕ್ಖಿ~ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲವು ವರ್ಷ ಸಲ್ಲಿಸಿ ನಂತರ ಅಲಿಘಡ ವಿ.ವಿ ಉರ್ದು ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.

ಉರ್ದು, ಹಿಂದಿ ಹಾಗೂ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಅವರ `ಸಾತ್ವಾಂ ದರ್~ (ಏಳನೇ ದ್ವಾರ) `ಖ್ವಾಬ್ ಕಾ ದರ್ ಬಂದ್ ಹೈ~(ಕನಸುಗಳ ಬಾಗಿಲು ಮುಚ್ಚಿದೆ), `ಕಹೀಂ ಕುಛ್ ಕಮ್ ಹೈ~ (ಎಲ್ಲೋ ಸ್ವಲ್ಪ ಕೊರತೆ ಇದೆ) ಅವರ ಮಹತ್ವದ ಕೃತಿಗಳಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.