ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಭಾಲ್ ಮತ್ತು ಚೀನಾದ ಆಡಳಿತಾರೂಡ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಯಾಂಗ್ ಜೀಚಿ, ಗಡಿ ವಿವಾದದ ಕುರಿತು ಶುಕ್ರವಾರ ಚರ್ಚೆ ನಡೆಸಿದ್ದಾರೆ.
74 ದಿನಗಳ ಕಾಲ ತಲೆದೋರಿದ್ದ ದೋಕಲಾ ಬಿಕ್ಕಟ್ಟಿನ ನಂತರ ಭಾರತ–ಚೀನಾ ನಡುವೆ ನಡೆದ ಎರಡನೇ ಮಾತುಕತೆ ಇದಾಗಿದೆ. ಗಡಿವಿವಾದ ಬಗೆಹರಿಸಿಕೊಳ್ಳಲು ಎರಡೂ ರಾಷ್ಟ್ರಗಳು ಪ್ರಯತ್ನಿಸುತ್ತಿವೆ.
ಭಾರತ–ಚೀನಾ ಗಡಿ ವಿವಾದ ಕುರಿತ ಮಾತುಕತೆಯ ವಿಶೇಷ ಪ್ರತಿನಿಧಿಗಳಾದ ದೋಭಾಲ್ ಮತ್ತು ಯಾಂಗ್ ಚರ್ಚೆ ನಡೆಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ. ಆದರೆ ಮಾತುಕತೆಯ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ. ಯಾಂಗ್, ಚೀನಾದ ವಿದೇಶಾಂಗ ವ್ಯವಹಾರಗಳ ಆಯೋಗದ ನಿರ್ದೇಶಕರೂ ಹೌದು.
ಕಳೆದ ವರ್ಷದ ಡಿಸೆಂಬರ್ನಲ್ಲಿ ನವದೆಹಲಿಯಲ್ಲಿ ನಡೆದಿದ್ದ 20ನೇ ಸುತ್ತಿನ ಮಾತುಕತೆಯಲ್ಲಿ ಯಾಂಗ್ ಭಾಗವಹಿಸಿದ್ದರು. ಆಗ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಲು ಎರಡೂ ದೇಶಗಳು ನಿರ್ಧರಿಸಿದ್ದವು. ಆಗಿನಿಂದ ಎರಡೂ ದೇಶಗಳು ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್, ಅಣ್ವಸ್ತ್ರ ಪೂರೈಕೆದಾರ ರಾಷ್ಟ್ರಗಳ ಗುಂಪಿಗೆ ಭಾರತದ ಸೇರ್ಪಡೆ, ಜೈಷ್–ಎ–ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯು ಭಯೋತ್ಪಾದಕ ಎಂದು ಘೋಷಿಸಬೇಕು ಎಂಬುದೂ ಸೇರಿದಂತೆ ವಿವಿಧ ವಿಷಯಗಳ ಭಿನ್ನಾಭಿಪ್ರಾಯ
ಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.