ADVERTISEMENT

ಗಾಂಧೀಜಿ ಚಿಂತನೆ ಸಾರ್ವಕಾಲಿಕ - ಬಾನ್ ಕೀ ಮೂನ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST
ಗಾಂಧೀಜಿ ಚಿಂತನೆ ಸಾರ್ವಕಾಲಿಕ - ಬಾನ್ ಕೀ ಮೂನ್
ಗಾಂಧೀಜಿ ಚಿಂತನೆ ಸಾರ್ವಕಾಲಿಕ - ಬಾನ್ ಕೀ ಮೂನ್   

ವಿಶ್ವಸಂಸ್ಥೆ (ಪಿಟಿಐ): ಮಹಾತ್ಮ ಗಾಂಧೀಜಿ ಬೋಧಿಸಿದ ಅಹಿಂಸಾ ತತ್ವವು ಟುನೀಷಿಯಾದಿಂದ ಈಜಿಪ್ಟ್‌ವರೆಗೆ ನಿರಂಕುಶ ಆಡಳಿತವನ್ನು ಪದಚ್ಯುತಗೊಳಿಸಲು ನೆರವಾಗಿದ್ದು, ಈ ದೇಶಗಳಲ್ಲಿನ ಜನರು ಬಂದೂಕಿನ ಸದ್ದಿಗಿಂತಲೂ ಶಾಂತಿ ಮಾರ್ಗಕ್ಕೆ ಪೂರಕವಾದ ಬರವಣಿಗೆಗಳೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕೀ ಮೂನ್ ಅಭಿಪ್ರಾಯಪಟ್ಟಿದ್ದಾರೆ.

ಗಾಂಧೀಜಿ ಜನ್ಮ ದಿನಾಚರಣೆ ಅಂಗವಾಗಿ ಮುನ್ನಾದಿನ ಶನಿವಾರ ಇಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಅಹಿಂಸಾ ದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. `ಕಳೆದ ಕೆಲವು ವರ್ಷಗಳಿಂದ ಮಧ್ಯಪ್ರಾಚ್ಯ

ಗಾಂಧಿಮಾರ್ಗದಿಂದ ಶಾಂತಿ: ಗುಹಾ
ಖ್ಯಾತ ಇತಿಹಾಸ ತಜ್ಞ ಮತ್ತು `ಪ್ರಜಾವಾಣಿ~ ಅಂಕಣಕಾರ ರಾಮಚಂದ್ರ ಗುಹಾ ಅವರು ಈ ಐತಿಹಾಸಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ `ಮಹಾತ್ಮ ಗಾಂಧಿಯವರ ಸತ್ಯಾಗ್ರಹ, ಅಹಿಂಸಾ ಚಳವಳಿಯ ಮೂಲಸತ್ವಗಳು ಇವತ್ತು ಭಾರತದ ಜನಮಾನಸದಲ್ಲಿ ಪರಿಣಾಮಕಾರಿಯಾಗಿ ಬೇರು ಬಿಟ್ಟಿರುವುದನ್ನು ಕಾಣಬಹುದಾಗಿದೆ~ ಎಂದರು.
ಗಾಂಧೀಜಿ ವಿಚಾರಧಾರೆಯು ಈಚೆಗೆ ಅಣ್ಣಾ ಹಜಾರೆಯವರ ಆಂದೋಲನದ ಸ್ವರೂಪದಲ್ಲಿ ಭ್ರಷ್ಟಾಚಾರದ ವಿರುದ್ಧ ಬಲು ದೊಡ್ಡ ಧ್ವನಿಯಾಗಿದ್ದನ್ನು ಗುಹಾ ಅವರು ಸ್ಮರಿಸಿಕೊಂಡರು. ಪ್ರಸಕ್ತ ಜಗತ್ತಿನಾದ್ಯಂತ ಕಂಡು ಬರುತ್ತಿರುವ ಹಿಂಸಾ ಚಟುವಟಿಕೆಗಳನ್ನು ತಹಬಂದಿಗೆ ತರುವ ದಿಸೆಯಲ್ಲಿ ಗಾಂಧಿಮಾರ್ಗ ಬಹಳ ಸೂಕ್ತ ಎಂದೂ ಗುಹಾ ಅಭಿಪ್ರಾಯ ಪಟ್ಟರು.

ಮತ್ತು ಉತ್ತರ ಆಫ್ರಿಕಾ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟಗಳು ಅಹಿಂಸಾ ಶಕ್ತಿಯನ್ನು ಪ್ರಕಟಪಡಿಸಿವೆ~ ಎಂದರು. ಬೌದ್ಧ ಧರ್ಮ ಸ್ವೀಕರಿಸಿದ ನಂತರ ಇಡೀ ಜೀವನವನ್ನೇ ಜನಕಲ್ಯಾಣಕ್ಕಾಗಿ ಮುಡುಪಾಗಿಟ್ಟ ಸಾಮ್ರಾಟ್ ಅಶೋಕನನ್ನು ಸ್ಮರಿಸಿದ ಅವರು, ಅಶೋಕನ ಚಿಂತನೆಯನ್ನು ಮೈಗೂಡಿಸಿಕೊಂಡ ಗಾಂಧೀಜಿ, ಈ ಮಾರ್ಗದ ಮೂಲಕವೇ ಭಾರತೀಯ ಸ್ವಾತಂತ್ರ್ಯ ಚಳವಳಿ ಮುನ್ನಡೆಸಿದರು.  ಗಾಂಧೀಜಿಯವರ ದಕ್ಷಿಣ ಆಫ್ರಿಕಾದಲ್ಲಿನ ಅನುಭವ ಕುರಿತ ಬರವಣಿಗೆಯು  ಮಾರ್ಟಿನ್‌ಲೂಥರ್‌ರಂತಹ ಕಪ್ಪು ವರ್ಣೀಯ ಜಾಗತಿಕ ನಾಯಕರ ಮೇಲೆ ಸಾಕಷ್ಟು ಪ್ರಭಾವ ಬೀರಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT