ವಾಷಿಂಗ್ಟನ್ (ಪಿಟಿಐ): ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಪುನಸ್ಥಾಪನೆ ಮಾಡುವಂತೆ ಗುಜರಾತ್ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವೊಂದನ್ನು ಕೋಮು ಗಲಭೆಗಳ 10ನೇ ವರ್ಷಾಚರಣೆ ಸಂದರ್ಭದಲ್ಲಿ ಅಮೆರಿಕನ್ ಸಂಸತ್ ನಲ್ಲಿ (ಪ್ರತಿನಿಧಿಗಳ ಸಭೆ) ಮಂಡಿಸಲಾಗಿದೆ.
ಬಂಧನಕಾರಿಯಲ್ಲದ ಈ ನಿರ್ಣಯನ್ನು (ಎಚ್. ಆರ್ ಇ ಎಸ್ 569) ಗುಜರಾತಿನಲ್ಲಿ ನಡೆದ ಕೋಮು ಗಲಭೆಗಳ ದಶ ವರ್ಷಾಚರಣೆಯನ್ನುಪರಿಗಣಿಸಿ ಕಾಂಗ್ರೆಸ್ ಸದಸ್ಯ ಕೀತ್ ಎಲ್ಲಿಸನ್ ಅವರು ಈ ವಾರಾರಂಭದಲ್ಲಿ ಮಂಡಿಸಿದ್ದಾರೆ. ಇತರ ಹಲವು ನಿರ್ಣಯಗಳಂತೆ ಈ ನಿರ್ಣಯಕ್ಕೂ ಸಹ ಪ್ರಾಯೋಜಕರಾರೂ ಇಲ್ಲ. ನಿರ್ಣಯವನ್ನು ಮಂಡನೆಯ ಬಳಿಕ ಅಗತ್ಯ ಕ್ರಮದ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಕಳುಹಿಸಲಾಗಿದೆ.
2002ರಲ್ಲಿ ಗುಜರಾತಿನಲ್ಲಿ ಸಂಭವಿಸಿದ ಗಲಭೆ ಸಂದರ್ಭದಲ್ಲಿ ಗೋಧ್ರಾ ರೈಲು ಅಗ್ನಿಕಾಂಡದಲ್ಲಿ ಮೃತರಾದವರೂ ಸೇರಿದಂತೆ ಮೃತರಾದ ಎಲ್ಲರೂ ಅನುಭವಿಸಿದ ಸಂಕಷ್ಟಗಳನ್ನು ಪರಿಗಣಿಸಿದ ನಿರ್ಣಯವು ಗುಜರಾತ್ ಸರ್ಕಾರವು 2002ರ ಹಿಂಸಾಚಾರ ಕಾಲದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹೇಳಿದೆ.
2002ರ ಹಿಂಸಾಚಾರದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಷಾಮೀಲಾಗಿದ್ದರು ಎಂಬುದಾಗಿ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಗುಂಪುಗಳು ನೀಡಿರುವ ವರದಿಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದ ನಿರ್ಣಯವು, ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ (1998) ಉಲ್ಲಂಘನೆಯ ನೆಲೆಯಲ್ಲಿ 2005ರಲ್ಲಿ ಅಮೆರಿಕ ಸರ್ಕಾರವು ಮೋದಿ ಅವರಿಗೆ ವೀಸಾ ನಿರಾಕರಿಸಿದ್ದನ್ನು ಶ್ಲಾಘಿಸಿದೆ.
ದಿ ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (ಐಎಎಂಸಿ) ಕೂಡಾ ಪತ್ರಿಕಾ ಹೇಳಿಕೆಯೊಂದರಲ್ಲಿ ಅಮೆರಿಕ ಸಂಸತ್ತಿನಲ್ಲಿ ಈ ನಿರ್ಣಯ ಮಂಡನೆಗಾಗಿ ಶ್ಲಾಘಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.