ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣವನ್ನು ತ್ವರಿತವಾಗಿ ವಿಚಾರಣೆಗೆ ಎತ್ತಿಕೊಳ್ಳುವಂತೆ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಪಾಕಿಸ್ತಾನ ಮನವಿ ಮಾಡಿದೆ.
ಹೇಗ್ನಲ್ಲಿರುವ ಐಸಿಜೆಯ ರಿಜಿಸ್ಟ್ರಾರ್ಗೆ ಈ ಸಂಬಂಧ ಪಾಕಿಸ್ತಾನದ ವಿದೇಶಾಂಗ ಕಚೇರಿ ಪತ್ರ ಬರೆದಿದೆ ಎಂದು ‘ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ನವೆಂಬರ್ನಲ್ಲಿ ಐಸಿಜೆಯ ನ್ಯಾಯಮೂರ್ತಿಗಳ ಆಯ್ಕೆಗೆ ಚುನಾವಣೆ ನಡೆಯಲಿರುವುದರಿಂದ ಅದಕ್ಕೆ ಮೊದಲೇ ವಿಚಾರಣೆ ನಡೆಸಬೇಕು ಎಂದು ಕೋರಲಾಗಿದೆ.
‘ಜಾಧವ್ ಪ್ರಕರಣವನ್ನು ಐಸಿಜೆ ಅಕ್ಟೋಬರ್ನಲ್ಲಿ ಆರಂಭಿಸಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆಗೆ ಪಾಕಿಸ್ತಾನದ ಅಟಾರ್ನಿ ಜನರಲ್ ಅಶ್ತಾರ್ ಔಸಫ್ ಅಲಿ ಹಾಜರಾಗಲಿದ್ದಾರೆ. ವಕೀಲ ಖವಾರ್ ಖುರೇಶಿ ಅವರನ್ನು ಬದಲಿಸುವ ಬಗ್ಗೆ ಪಾಕಿಸ್ತಾನ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಬಂಧಿತ ಭಾರತೀಯನ ಭೇಟಿಗೆ ಮನವಿ
ಪ್ರಯಾಣ ಹಾಗೂ ವೀಸಾ ದಾಖಲೆ ಇಲ್ಲದೇ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಮುಂಬೈನ ಪೂರ್ವ ಜೋಗೇಶ್ವರಿ ನಿವಾಸಿ ಶೇಕ್ ನಬಿ ಅಹ್ಮದ್ ಭೇಟಿಗೆ ಅವಕಾಶ ನೀಡುವಂತೆ ಭಾರತ, ಪಾಕಿಸ್ತಾನಕ್ಕೆ ಮನವಿ ಮಾಡಿದೆ. ನಬಿ ಅಹ್ಮದ್ ಅವರನ್ನು ಮೇ 19 ರಂದು ಬಂಧಿಸಲಾಗಿದೆ. ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್ ನಬಿ ಅವರ ಭೇಟಿ ಮಾಡಲು ಮತ್ತು ಇತರ ಮಾಹಿತಿ ಪಡೆಯಲು ಮನವಿ ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.