ಕರಾಚಿ (ಪಿಟಿಐ): ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪವಿತ್ರ ಧರ್ಮಗ್ರಂಥ ವಿರೂಪ ಆರೋಪಕ್ಕೆ ಸಂಬಂಧಿಸಿದಂತೆ ಉದ್ರಿಕ್ತರ ಗುಂಪೊಂದು ಹಿಂದೂ ದೇವಾಲಯ ಮತ್ತು ಧರ್ಮಶಾಲೆಗೆ ಶನಿವಾರ ರಾತ್ರಿ ಬೆಂಕಿ ಹಚ್ಚಿದೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿ, ಗುಂಪನ್ನು ಚದುರಿಸಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಇದ್ದು, ಕರ್ಫ್ಯೂ ವಿಧಿಸಲಾಗಿದೆ. ಭದ್ರತೆಯ ಕಾರಣದಿಂದ ಹಿಂದೂಗಳ ಹೋಳಿ ಸಂಭ್ರಮವನ್ನು ಭಾನುವಾರ ರದ್ದುಪಡಿಸಲಾಯಿತು.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಪ್ರಬಲವಿರುವ ಮತ್ತು ಭುಟ್ಟೊ ಕುಟುಂಬದ ತವರು ನಗರ ಲಾರ್ಕಾನದಲ್ಲಿ ಈ ದಾಳಿ ನಡೆದಿದೆ. ಹಿಂದೂ ವ್ಯಕ್ತಿಯೊಬ್ಬರ ಮನೆಯನ್ನು ಸುತ್ತುವರಿದ ದುಷ್ಕರ್ಮಿಗಳು, ಆತನ ವಿರುದ್ಧ ಧರ್ಮಗ್ರಂಥದ ಕೆಲವು ಪುಟಗಳನ್ನು ಸುಟ್ಟ ಆರೋಪ ಮಾಡಿದರು. ಧರ್ಮನಿಂದನೆ ವದಂತಿ ಹಬ್ಬಿದ ತಕ್ಷಣ ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಸಂಸ್ಥೆ ಅನುಯಾಯಿಗಳು, ಆತನನ್ನು ತಮಗೆ ಒಪ್ಪಿಸುವಂತೆ ಆಗ್ರಹಿಸಿದರು. ಪೊಲೀಸರು ರಕ್ಷಣಾತ್ಮಕವಾಗಿ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳೀಯ ಮಾಧ್ಯಮ ವರದಿ ಪ್ರಕಾರ, ಮುಸ್ಲಿಮರ ಮನೆ ಬಾಡಿಗೆ ಪಡೆದಿದ್ದ ಹಿಂದೂ ವ್ಯಕ್ತಿ, ಅದನ್ನು ತೆರವು ಮಾಡುವಾಗ ಹಳೆಯ ವಸ್ತುಗಳಿಗೆ ಬೆಂಕಿ ಹಚ್ಚಿದ್ದು, ಆಗ ತಿಳಿಯದೆ ಧರ್ಮಗ್ರಂಥದ ಕೆಲವು ಹಾಳೆಗಳು ಸುಟ್ಟು ಹೋಗಿರುವುದಾಗಿ ಹೇಳಲಾಗಿದೆ.
ಈ ಮಧ್ಯೆ, ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಸೈಯದ್ ಖ್ವೈಮ್ ಅಲಿ ಷಾ ಅವರು ಶಾಂತಿ ಕಾಪಾಡಲು ಮತ್ತು ಘಟನೆ ಬಗ್ಗೆ ತನಿಖೆ ಕೈಗೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.