ಕಠ್ಮಂಡು (ಪಿಟಿಐ): ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಬಸ್ಸೊಂದು ದಕ್ಷಿಣ ನೇಪಾಳದ ಗಂಡಕಿ ಕಣಿವೆಗೆ ಜಾರಿ ಉರುಳಿದ ಪರಿಣಾಮವಾಗಿ ಕನಿಷ್ಠ 36 ಮಂದಿ ಯಾತ್ರಾರ್ಥಿಗಳು ಅಸು ನೀಗಿದ್ದಾರೆ. ಮೃತರಲ್ಲಿ ಬಹುತೇಕ ಮಂದಿ ಭಾರತೀಯರು ಎಂದು ಹೇಳಲಾಗಿದೆ.
ಬಸ್ಸು ಬಹುತೇಕ ಉತ್ತರ ಪ್ರದೇಶದ ಸುಮಾರು 70ರಿಂದ 80 ಮಂದಿ ಹಿಂದು ಯಾತ್ರಾರ್ಥಿಗಳನ್ನುರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮಕ್ಕೆ 150 ಕಿ.ಮೀ. ದೂರದಲ್ಲಿರುವ ನವಲ್ ಪಾರಸಿ ಜಿಲ್ಲೆಯ ದೇವಾಲಯವೊಂದಕ್ಕೆ ಕರೆದೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ನವಲ್ ಪಾರಸಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತ ಸ್ಥಳವು ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 250 ಕಿ.ಮೀ. ದೂರದಲ್ಲಿದೆ. ಬಹುತೇಕ ಯಾತ್ರಾರ್ಥಿಗಳು ತ್ರಿವೇಣಿ ಘಾಟ್ ನಲ್ಲಿ ನಡೆಯುವ ಬೋಲ್ಬಮ್ ಉತ್ಸವದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು ಎಂದು ಅಧಿಕಾರಿಗಳು ಹೇಳಿದರು.
ಪೊಲೀಸರು ಈವರೆಗೆ 25 ಮಂದಿ ಪುರುಷರು ಮತ್ತು 10 ಮಂದಿ ಮಹಿಳೆಯರ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ ಅವರ ಗುರುತುಗಳನ್ನು ಇನ್ನೂ ಪತ್ತೆ ಹಚ್ಚ ಬೇಕಾಗಿದೆ. ಗಾಯಗೊಂಡಿರುವ 10 ಮಂದಿಯ ಪೈಕಿ ಐವರಿಗೆ ನವಲ್ ಪಾರಸಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆಗೆ ಸೆಮೋರಿ ಗ್ರಾಮದ ಚೌಪಟ್ಟಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಸ್ಸಿನಲ್ಲಿ ಮಿತಿ ಮೀರಿದ ಪ್ರಯಾಣಿಕರಿದ್ದುದೇ ಅಪಘಾತಕ್ಕೆ ಮುಖ್ಯ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಮತ್ತು ನೇಪಾಳ ಸೇನಾ ಪಡೆ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯವನ್ನು ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.