ಢಾಕಾ(ಪಿಟಿಐ): ಬಾಂಗ್ಲಾದೇಶದ ಮೂಲಭೂತವಾದಿ ಜಮಾತೆ ಇಸ್ಲಾಮಿ ಪಕ್ಷದ ನಾಯಕ ಅಬ್ದುಲ್ ಖಾದರ್ ಮುಲ್ಲಾನನ್ನು ಗುರುವಾರ ರಾತ್ರಿ ಗಲ್ಲಿಗೇರಿಸಿದ ಬೆನ್ನಲ್ಲೇ ದೇಶದಾದ್ಯಂತ ಭುಗಿಲೆದ್ದ ವ್ಯಾಪಕ ಹಿಂಸಾಚಾರಕ್ಕೆ ನಾಲ್ವರು ಬಲಿಯಾಗಿದ್ದಾರೆ.
ಜಮಾತೆ ಇಸ್ಲಾಮಿ ಕಾರ್ಯಕರ್ತರು ಹಾಗೂ ಅವಾಮಿ ಲೀಗ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಇವರು ಬಲಿಯಾಗಿದ್ದಾರೆ.
ಮುಲ್ಲಾನನ್ನು ನೇಣಿಗೇರಿಸಿದ ಸುದ್ದಿ ಹಬ್ಬುತ್ತಿದ್ದಂತೆ ಆಕ್ರೋಶಗೊಂಡ ಜಮಾತೆ ಕಾರ್ಯಕರ್ತರು ಹಾಗೂ ಇದರ ವಿದ್ಯಾರ್ಥಿ ಘಟಕದ ಕಾರ್ಯಕರ್ತರು 50ಕ್ಕೂ ಹೆಚ್ಚು ಮನೆ, ವಾಹನ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದರು.
ಇವರ ದಾಳಿಯಿಂದ ಆವಾಮಿ ಲೀಗ್ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದವರು ತೊಂದರೆಗೊಳಗಾಗಿದ್ದಾರೆ. ಪ್ರಧಾನಿ ಶೇಖ್ ಹಸೀನಾ ಬೆಂಬಲಿಗರು ಎಂಬ ಕಾರಣಕ್ಕೆ ಹಿಂದೂಗಳ ಮೇಲೆ ದಾಳಿ ನಡೆಸಲಾಗಿದೆ. ರಾಜಧಾನಿ ಢಾಕಾದಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿದ್ದು, ಹಲವು ನಗರ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.
ಪ್ರತೀಕಾರದ ಬೆದರಿಕೆ: ಮುಲ್ಲಾ ಗಲ್ಲು ‘ರಾಜಕೀಯ ಕೊಲೆ’ ಎಂದು ಕರೆದಿರುವ ಜಮಾತೆ ಪಕ್ಷ, ನಾಯಕನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಒಡ್ಡಿದೆ.
ಜಮಾತ್ ಬೆಂಬಲಿಗರು ಹಲವು ಕಡೆಗಳಲ್ಲಿ ಕಚ್ಚಾಬಾಂಬ್ಗಳನ್ನು ಎಸೆದಿದ್ದರು. ಜೊತೆಗೆ ಪೊಲೀಸರೊಂದಿಗೆ ಘರ್ಷಣೆ ಗೂ ಇಳಿದಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರೂ ಸಹ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಮುಲ್ಲಾ ಗಲ್ಲು ವಿರೋಧಿಸಿ ಇಸ್ಲಾಮಿಕ್ ಪಕ್ಷ ಭಾನುವಾರ ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದೆ.
ಅಂತ್ಯಸಂಸ್ಕಾರ: ಮುಲ್ಲಾ ಮೃತದೇಹವನ್ನು ಫರೀದ್ಪುರ ಜಿಲ್ಲೆಯ ಅಮೀರಾಬಾದ್್ ಗ್ರಾಮದಲ್ಲಿ ಆತನ ಪೂರ್ವಜರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಆತಂಕ: ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ಹೆಚ್ಚಿನ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಆತಂಕ ವ್ಯಕ್ತಪಡಿಸಿದೆ.
ಹಿಂದೂಗಳನ್ನೇ ಗುರಿಯಾಗಿರಿಸಿಕೊಂಡು ಹಿಂಸಾಚಾರ ನಡೆಯಲಿದೆ ಎಂದು ಬಾಂಗ್ಲಾದೇಶ ಸಂಶೋಧಕ ಅಬ್ಬಾಸ್್ ಫಯಾಜ್ ಹೇಳಿದ್ದಾರೆ.
ಹಿಂದೂ ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು ಎಂದಿರುವ ಅವರು ಈ ವರ್ಷದಾದ್ಯಂತ ನಡೆದ ಹಿಂಸಾಚಾರದಲ್ಲಿ ಹಲವು ಹಿಂದೂಗಳು ಮೃತಪಟ್ಟಿದ್ದರೂ ಯಾರಿಗೂ ಈವಹೇಳಿದ್ದಾರೆ.
ಅಮೆರಿಕ ಮನವಿ: ಮುಲ್ಲಾಗೆ ಗಲ್ಲು ವಿಧಿಸಿದ ನಂತರ ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಯಾವುದೇ ರೀತಿ ಕುಮ್ಮಕ್ಕು ನೀಡದಂತೆ ಅಲ್ಲಿನ ರಾಜಕೀಯ ಪಕ್ಷಗಳಿಗೆ ಅಮೆರಿಕ ಮನವಿ ಮಾಡಿದೆ.
ಬಾಂಗ್ಲಾದಲ್ಲಿ ಈಗ ಸೂಕ್ಷ್ಮ ವಾತಾವರಣವಿದೆ. ಈ ಸಂದರ್ಭವನ್ನೇ ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ವಿದೇಶಾಂಗ ಇಲಾಖೆ ವಕ್ತಾರ ಮಾರಿ ಹಾರ್ಪ್ ಹೇಳಿದ್ದಾರೆ. ಹಿಂಸಾಚಾರ ಹಾಗೂ ಇತರ ಬೆಳವಣಿಗೆಗಳನ್ನು ವಿರೋಧ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.
ಪಾಕ್ ಖಂಡನೆ: ಪಾಕಿಸ್ತಾನಕ್ಕೆ ನಿಷ್ಠರಾಗಿದ್ದ ಮುಲ್ಲಾನನ್ನು ಗಲ್ಲಿಗೇರಿಸಿರುವುದು ದುರದೃಷ್ಟ ಕರ ಎಂದು ಪಾಕ್ ಆಂತರಿಕ ಭದ್ರತಾ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಖಂಡಿಸಿದ್ದಾರೆ.
ಮಾಜಿ ಸರ್ವಾಧಿಕಾರಿ ಆಸ್ಪತ್ರೆಗೆ ದಾಖಲು
ಢಾಕಾ(ಪಿಟಿಐ): ಭದ್ರತಾಪಡೆಗಳು ಶುಕ್ರವಾರ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದ ಬಾಂಗ್ಲಾದೇಶದ ಮಾಜಿ ಸರ್ವಾಧಿಕಾರಿ ಎಚ್.ಎಂ. ಇರ್ಷಾದ್ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಬಹಿಷ್ಕರಿಸುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ
ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇರ್ಷಾದ್ ಅವರನ್ನು ಬಂಧಿಸಲಾಗಿದೆ ಎಂದು ಅವರ ಸೇನೆಯ ಅಧಿಕಾರಿ ಹಬೀಬುರ್ ರೆಹಮಾನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.