ADVERTISEMENT

ಭೂಕಂಪನದ ಬದಲಿಗೆ ಕ್ಷಿಪಣಿ ದಾಳಿ ಎಚ್ಚರಿಕೆ!

ಜಪಾನ್ ವಿಮಾನ ಸಚಿವಾಲಯ ಅಧಿಕಾರಿ ಎಸಗಿದ ಅಚಾತುರ್ಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಟೋಕಿಯೊ (ಎಎಫ್‌ಪಿ, ಎಪಿ): ಜಪಾನಿನ ಪೂರ್ವ ಭಾಗದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೂಕಂಪನದ ಬಗ್ಗೆ ಎಚ್ಚರಿಕೆ ಸಂದೇಶ ಕಳುಹಿಸಬೇಕಾದ ಬದಲಿಗೆ, ಅಧಿಕಾರಿಯೊಬ್ಬರು ಪ್ರಮಾದವಶಾತ್ ಉತ್ತರ ಕೊರಿಯಾ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ಸಂದೇಶ ರವಾನಿಸಿದ ಘಟನೆ ನಡೆಯಿತು.

`ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿದೆ' ಎಂಬ ಎಚ್ಚರಿಕೆ ಸಂದೇಶವುಳ್ಳ ಇ-ಮೇಲ್‌ನ್ನು ಪೂರ್ವ ಒಸಾಕ ವಿಮಾನಯಾನ ಕೇಂದ್ರದ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು 87 ವಿಮಾನ ನಿಲ್ದಾಣಗಳ ಕಚೇರಿಗೆ ಕಳುಹಿಸಿದ್ದರು ಎಂದು ಸಚಿವಾಲಯ ಹೇಳಿದೆ.

`ಹ್ಯೊಗೊ ಪ್ರಾಂತ್ಯದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪನದಿಂದಾಗಿ ವಿಮಾನ ನಿಲ್ದಾಣಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಿ' ಎಂಬ ಸಂದೇಶವನ್ನು ಅಧಿಕಾರಿ ಕಳುಹಿಸಬೇಕಿತ್ತು ಎಂದು ಸಚಿವಾಲಯ ತಿಳಿಸಿದೆ.

ಆದರೆ ಭೂಕಂಪನದ ಮಾಹಿತಿಯ ಬದಲಾಗಿ, ಉತ್ತರ ಕೊರಿಯಾದ ಸಂಭಾವ್ಯ ಕ್ಷಿಪಣಿ ದಾಳಿಯ ಬಗ್ಗೆ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿದ್ದ ಸಂದೇಶವನ್ನು ಅಧಿಕಾರಿ ಪ್ರಮಾದವಶಾತ್ ಕಳುಹಿಸಿದರು. ಆರು ನಿಮಿಷಗಳ ಬಳಿಕ ತಪ್ಪು ಮಾಹಿತಿಯನ್ನು ವಾಪಸ್ ಪಡೆಯಲಾಯಿತು ಎಂದು ಸಚಿವಾಲಯ ಹೇಳಿದೆ.

ಉತ್ತರ ಕೊರಿಯಾವು ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಜಪಾನಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಪ್ರಬಲ ಭೂಕಂಪನ: ಜಪಾನಿನ ಪೂರ್ವ ಭಾಗದಲ್ಲಿ ಶನಿವಾರ ಸಂಭವಿಸಿದ 6.3ರಷ್ಟು ತೀವ್ರತೆಯ ಭೂಕಂಪನದಿಂದ 23 ಜನರು ಗಾಯಗೊಂಡಿದ್ದಾರೆ. 7 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.