ನ್ಯೂಯಾರ್ಕ್ (ಪಿಟಿಐ): ಸಾವಿರಾರು ಜನರ ಸಾವಿಗೆ ಕಾರಣವಾದ ಭೋಪಾಲ್ ವಿಷಾನಿಲ ದುರಂತಕ್ಕೆ ಸಂಬಂಧಿಸಿದಂತೆ ಅಮೆರಿಕದ ಜಿಲ್ಲಾ ನ್ಯಾಯಾಲಯತೀರ್ಪು ನೀಡಿದ್ದು, ಭೋಪಾಲ್ನಲ್ಲಿನ ಪರಿಸರ ಮಾಲಿನ್ಯಕ್ಕೆ ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ (ಯುಸಿಸಿ) ಅಥವಾ ಕಂಪೆನಿಯ ಮಾಜಿ ಅಧ್ಯಕ್ಷ ವಾರನ್ ಆ್ಯಂಡರ್ಸನ್ ಹೊಣೆಗಾರ ಆಗಲಾರರು ಎಂದಿದೆ.
ಅನಿಲ ದುರಂತದಿಂದ ಭೋಪಾಲ್ನಲ್ಲಿ ಮಣ್ಣು ಹಾಗೂ ಅಂತರ್ಜಲ ಕಲುಷಿತಗೊಂಡಿದ್ದು `ಯುಸಿಸಿ~ ಪರಿಹಾರ ನೀಡಬೇಕು ಎಂದು ಜಾನಕಿ ಬಾಯಿ ಸಾಹು ಮತ್ತಿತರು ಸಲ್ಲಿಸಿದ ಅರ್ಜಿಯನ್ನು ಮ್ಯಾನ್ಹಟ್ಟನ್ ಜಿಲ್ಲಾ ನ್ಯಾಯಾಧೀಶ ಜಾನ್ ಕೀನಾ ವಜಾಗೊಳಿಸಿದ್ದಾರೆ.
ಸಂತ್ರಸ್ತರಿಗೆ ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಅಥವಾ ವಾರನ್ ಆ್ಯಂಡರ್ಸನ್ ಪರಿಹಾರ ನೀಡಬೇಕಿಲ್ಲ ಎಂದೂ ಕೋರ್ಟ್ ಹೇಳಿದೆ.
ಮಾಲಿನ್ಯಕ್ಕೆ ಕಾರಣವಾದ ತ್ಯಾಜ್ಯ ವಿಲೇವಾರಿ ಮಾಡುವ ಜವಾಬ್ದಾರಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ನ್ದ್ದದೇ ಹೊರತು ಅದರ ಮಾತೃ ಸಂಸ್ಥೆ `ಯುಸಿಸಿ~ಯದ್ದಲ್ಲ. ಉಳಿದ ಹೊಣೆ ಅಲ್ಲಿಯ ರಾಜ್ಯ ಸರ್ಕಾರದ್ದೇ ಆಗಿದೆ ಎಂದು ಕೋರ್ಟ್ ಹೇಳಿದೆ.
`ಇಷ್ಟಕ್ಕೂ `ಯುಸಿಸಿ~ ಪರವಾಗಿ `ಯುಸಿಐಎಲ್~ ಕೀಟನಾಶಕಗಳನ್ನು ಉತ್ಪಾದಿಸುತ್ತಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ದುರಂತಕ್ಕೆ ಯುಸಿಸಿಯನ್ನು ನೇರವಾಗಿ ಹೊಣೆಗಾರ ಕಂಪೆನಿಯನ್ನಾಗಿ ಮಾಡುವಂತಿಲ್ಲ~ ಎಂದು ಕೀನಾ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
1984ರಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಯೂನಿಯನ್ ಕಾರ್ಬೈಡ್ ಘಟಕದಲ್ಲಿ ಮಿಥೈಲ್ ಐಸೊಸೈನೇಟ್ ವಿಷಾನಿಲ ಸೋರಿಕೆಯಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.