ಕೈರೊ (ಪಿಟಿಐ): ‘ಮನೆಗೆ ಮರಳುವಂತೆ’ ಸೂಚಿಸಿದ ಸೇನೆಯ ಆದೇಶವನ್ನು ಧಿಕ್ಕರಿಸಿದ ಲಕ್ಷಾಂತರ ಮಂದಿ ಪ್ರತಿಭಟನಾಕಾರರು ಶುಕ್ರವಾರ ಇಲ್ಲಿನ ತಹ್ರೀರ್ ಚೌಕಕ್ಕೆ ಮುತ್ತಿಗೆ ಹಾಕಿ ಪ್ರದರ್ಶನ ನಡೆಸಿದರು.
ಅಧಿಕಾರದಿಂದ ಕೆಳಗಿಳಿಯಬೇಕೆಂದು ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದರೂ ಅದನ್ನು ನಿರ್ಲಕ್ಷ್ಯಿಸುತ್ತಿರುವ ಮತ್ತು ಈಗ ಅಧಿಕಾರದಿಂದ ಕೆಳಗಿಳಿದರೆ ‘ಕೋಲಾಹಲ’ ಉಂಟಾಗುವುದೆಂದು ಹೇಳುತ್ತಿರುವ ಅಧ್ಯಕ್ಷ ಹೋಸ್ನಿ ಮುಬಾರಕ್ ತಕ್ಷಣ ಸ್ಥಾನ ತ್ಯಜಿಸಬೇಕು ಎಂದು ಪ್ರದರ್ಶನಕಾರರು ಒತ್ತಾಯಿಸಿದರು.
ರಾಕೆಟ್ ದಾಳಿ: ದಾಳಿಕೋರರು ರಾಷ್ಟ್ರೀಯ ಭದ್ರತಾ ಪ್ರಧಾನ ಕಚೇರಿ ಮೇಲೆ ರಾಕೆಟ್ ನಿರ್ದೇಶಿತ ಗ್ರೆನೇಡ್ ದಾಳಿ ನಡೆಸಿದ್ದಾರೆ.
ಗಾಜಾ ಪಟ್ಟಿಗೆ ಹೊಂದಿಕೊಂಡ ರಾಷ್ಟ್ರದ ಗಡಿ ಭಾಗದ ಎಲ್ ಆರಿಷ್ ಎಂಬ ಪಟ್ಟಣದಲ್ಲಿರುವ ಕಚೇರಿ ಮೇಲೆ ಶುಕ್ರವಾರ ನಡೆದ ಈ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತು ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಉತ್ತರ ಭಾಗದ ಪಟ್ಟಣವೊಂದರ ಪೊಲೀಸ್ ಠಾಣೆ ಮೇಲೆ ಉಗ್ರರು ಎರಡು ರಾಕೆಟ್ಗಳನ್ನು ನುಗ್ಗಿಸಿದ್ದ ಘಟನೆ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.