ದುಬೈ (ಪಿಟಿಐ): ಮತದಾರರ ಪಟ್ಟಿ ಸಿದ್ಧಪಡಿಸುವಿಕೆ, ಚುನಾವಣೆ ನಿರ್ವಹಣೆ ಕುರಿತು ಯೆಮನ್ಗೆ ಅಗತ್ಯ ನೆರವು ನೀಡಲು ಭಾರತ ಮುಂದಾಗಿದ್ದು, ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರು ಯೆಮನ್ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಯೆಮನ್ನ ಚುನಾವಣಾ ಸುಪ್ರೀಂ ಆಯೋಗದ ಅಧ್ಯಕ್ಷರ ಜತೆ ಸಂಪತ್ ಸಮಾಲೋಚನೆ ನಡೆಸಿದರು ಎಂದು ಸನಾದಲ್ಲಿರುವ ಭಾರತದ ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ. ‘ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿದ್ದು, ಮುಕ್ತ, ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ವಿಷಯದಲ್ಲಿ ಅಗಾಧ ಅನುಭವ ಹೊಂದಿದೆ. ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳುವಲ್ಲೂ ಭಾರತ ಮುಂದೆ ಇದ್ದು ಈ ವಿಷಯದಲ್ಲಿ ಯೆಮನ್ಗೆ ಅಗತ್ಯ ಸಹಕಾರ ಬೇಕಾಗಿದೆ’ ಎಂದು ಹೇಳಿಕೆ ತಿಳಿಸಿದೆ.
ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿದ್ದು, ಈ ಸಂದರ್ಭ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ನಿಯೋಗ ಕಳುಹಿಸುವಂತೆ ಸಂಪತ್, ಯೆಮನ್ ಅಧಿಕಾರಿಗಳಿಗೆ ಇದೇ ವೇಳೆ ಆಹ್ವಾನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.