ADVERTISEMENT

ಲಿಬಿಯಾದ ರಕ್ತಸಿಕ್ತ ಹಣ ಹಿಂದಿರುಗಿಸಲು ಪ್ರೊಫೆಸರ್ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 15:55 IST
Last Updated 6 ಮಾರ್ಚ್ 2011, 15:55 IST

ಲಂಡನ್ (ಪಿಟಿಐ):  ಲಿಬಿಯಾದ ನಾಯಕ ಮುಅಮ್ಮರ್ ಗಡಾಫಿ ಅವರ ಪುತ್ರ ಸೈಫ್ ಗಡಾಫಿ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ (ಎಲ್‌ಎಸ್‌ಇ) ಡಾಕ್ಟರೇಟ್ ಪಡೆದಿರುವ ವಿವಾದ ತೀವ್ರಗೊಳ್ಳುತ್ತಿದ್ದು, ಲಿಬಿಯಾದಿಂದ ಪಡೆದ ‘ರಕ್ತಸಿಕ್ತ’ವಾದ 1.8 ದಶಲಕ್ಷ ಪೌಂಡ್ ಹಣವನ್ನು ವಾಪಸ್ ಮಾಡಬೇಕು ಎಂದು ಅನಿವಾಸಿ ಭಾರತೀಯ ಪ್ರೊಫೆಸರ್ ಲಾರ್ಡ್ ಮೇಘನಾದ್ ದೇಸಾಯಿ ಒತ್ತಾಯಿಸಿದ್ದಾರೆ.

ಸೈಫ್ ಅವರ ಡಾಕ್ಟರೇಟ್ ಪ್ರಬಂಧವನ್ನು ಪರಿಶೀಲಿಸಿದವರಲ್ಲಿ ದೇಸಾಯಿ ಅವರೂ ಒಬ್ಬರು. ಲಿಬಿಯಾದಲ್ಲಿ ವಿರೋಧಿಗಳನ್ನು ಅಮಾನುಷವಾಗಿ ದಮನಿಸಲಾಗುತ್ತಿದೆ. ಹೀಗಾಗಿ ಅಲ್ಲಿಂದ ಪಡೆಯುವ ಯಾವುದೇ ರೀತಿಯ ಧನಸಹಾಯ ‘ವಿಷಕಾರಕ’ವಾಗಿರುತ್ತದೆ. ಹೀಗಾಗಿ ಗಡಾಫಿ ಅವರ ಅಂತರರಾಷ್ಟ್ರೀಯ ದತ್ತಿ ಮತ್ತು ಅಭಿವೃದ್ಧಿ ಪ್ರತಿಷ್ಠಾನದಿಂದ ಪಡೆದ ಹಣವನ್ನು ವಾಪಸ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸೈಫ್‌ಗೆ 2008ರಲ್ಲಿ ಡಾಕ್ಟರೇಟ್ ಪ್ರದಾನ ಮಾಡಿತ್ತು. ‘ದಿ ರೋಲ್ ಆಫ್ ಸಿವಿಲ್ ಸೊಸೈಟಿ ಇನ್ ದಿನ ಡೆಮಾಕ್ರಟೈಸೇಷನ್ ಆಫ್ ಗ್ಲೋಬಲ್ ಗವರ್ನೆನ್ಸ್ ಇನ್‌ಸ್ಟಿಟ್ಯೂಷನ್ಸ್’ ಎಂಬ ವಿಷಯದ ಮೇಲೆ ಸೈಫ್ ಪ್ರಬಂಧ ಮಂಡಿಸಿದ್ದರು ( ಈ ಪ್ರಬಂಧದ ಬಗ್ಗೆ ಈಚೆಗೆ ಕೃತಿಚೌರ್ಯದ ಆರೋಪವೂ ಕೇಳಿಬಂದಿತ್ತು). ಮರು ವರ್ಷ ಅವರ ಪ್ರತಿಷ್ಠಾನದ ದೇಣಿಗೆಯನ್ನು ಸ್ವೀಕರಿಸಲು ಈ ಪ್ರತಿಷ್ಠಿನ ಶಿಕ್ಷಣ ಸಂಸ್ಥೆ ಒಪ್ಪಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.