ವಿದೇಶಿಗರ ಅಪಹರಣ
ಲಾಹೋರ್ (ಪಿಟಿಐ): ಅಪರಿಚಿತ ಶಸ್ತ್ರಧಾರಿಗಳು ಇಬ್ಬರು ವಿದೇಶಿಗರನ್ನು ಪಂಜಾಬ್ ಪ್ರಾಂತ್ಯದ ಮುಲ್ತಾನ್ ಜಿಲ್ಲೆಯಲ್ಲಿ ಅಪಹರಿಸಿದ್ದಾರೆ.
ಅವರನ್ನು ಜರ್ಮನಿಯ ಬರ್ನ್ಡ್ (45) ಮತ್ತು ಇಟಲಿಯ ಗಿಯೊವನ್ನಿ (38) ಎಂದು ಗುರುತಿಸಲಾಗಿದೆ.
ಕಳೆದ ಸೆಪ್ಟೆಂಬರ್ನಿಂದ ಪ್ರವಾಹ ಸಂತ್ರಸ್ತರ ಪುನರ್ವಸತಿ ಕಾರ್ಯದಲ್ಲಿ ತೊಡಗಿರುವ ವೆಲ್ಟ್ಹಂಗರ್ಲೈಫ್ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಬ್ರಂಡ್ ಅವರು ಯೋಜನಾ ನಿರ್ದೇಶಕರಾಗಿ ಮತ್ತು ಗಿಯೊವನ್ನಿ ಅವರು ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಇರಾನ್ನಲ್ಲಿ ಭೂಕಂಪನ
ಟೆಹರಾನ್ (ಎಪಿ): ಇರಾನ್ನ ನೆಶಾಬರ್ ನಗರದಲ್ಲಿ ಗುರುವಾರ ಸಂಭವಿಸಿದ ಭೂಕಂಪನದಿಂದ ಗಾಯಗೊಂಡವರ ಸಂಖ್ಯೆ 230ಕ್ಕೆ ಏರಿದ್ದು, ನಗರದ ಬಹುತೇಕ ಭಾಗ ಹಾನಿಗೊಳಗಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಟಿ.ವಿ ವಾಹಿನಿ ಶುಕ್ರವಾರ ವರದಿ ಮಾಡಿದೆ.
30 ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಗಡಿ ಸ್ಥಿರತೆಗೆ ಬದ್ಧ
ಯಾಂಗನ್ (ಐಎಎನ್ಎಸ್): ಗಡಿ ಸ್ಥಿರತೆ, ಸ್ನೇಹ, ದ್ವಿಪಕ್ಷೀಯ ಬಾಂಧವ್ಯ ಮುಂದುವರಿಸುವ ಬದ್ಧತೆಯನ್ನು ಭಾರತ ಮತ್ತು ಮ್ಯಾನ್ಮಾರ್ ವ್ಯಕ್ತಪಡಿಸಿವೆ. ನೇ ಫಿಟಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮ್ಯಾನ್ಮಾರ್ನ ಉಪ ಗೃಹ ಸಚಿವರಾದ ಬ್ರಿಗೇಡಿಯರ್ ಜನರಲ್ ಕ್ಯಾ ಜಾನ್ ಮಿಂಟ್ ಮತ್ತು ಭಾರತದ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಉಭಯ ರಾಷ್ಟ್ರಗಳ ನಡುವಿನ ಮೈತ್ರಿಗೆ ಒತ್ತು ನೀಡಿದರು.
6 ನ್ಯಾಟೊ ಸಿಬ್ಬಂದಿ ಸಾವು
ಕಾಬೂಲ್ (ಐಎಎನ್ಎಸ್): ಆಪ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿ ನ್ಯಾಟೊ ಪಡೆಗೆ ಸೇರಿದ ಅಮೆರಿಕದ ಆರು ರಕ್ಷಣಾ ಸಿಬ್ಬಂದಿ ಮೃತಪಟ್ಟಿದಾರೆ.
ಘಟನೆಯ ಹಿಂದೆ ಶತ್ರುಗಳ ಕೈವಾಡ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.